ಚಿಕ್ಕಬಳ್ಳಾಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಘೋಷಿಸಿರುವ ಬಿಜೆಪಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್. ಬಚ್ಚೇಗೌಡ ಸ್ವಪಕ್ಷದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರು ಇರುವವರೆಗೂ ಬಿಜೆಪಿ ಜೊತೆ ಜೆಡಿಎಸ್ ಹೋಗುವುದಿಲ್ಲ ಎಂದು ಭಾವಿಸಿದ್ದೆ. ಜಾತ್ಯಾತೀತ ತತ್ವ ಅನುಸರಿಸುವ ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.
ಇದನ್ನೂ ಓದಿ: ಗಗನಸಖಿ ಹತ್ಯೆ ಪ್ರಕರಣ; ಪೊಲೀಸ್ ಲಾಕಪ್ನಲ್ಲಿ ಆರೋಪಿ ಆತ್ಮಹತ್ಯೆ
ಜೆಡಿಎಸ್ ಮತ್ತು ಬಿಜೆಪಿ ಒಂದಾಗುತ್ತದೆ ಎಂಬ ವಿಚಾರ ಗೌಪ್ಯವಾಗಿತ್ತು. ಆದರೆ, ಈಗ ಅದು ಜನರಿಗೆ ಗೊತ್ತಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಒಳ್ಳೆಯದಾಗುವುದಿಲ್ಲ. ರಾಜ್ಯದಲ್ಲಿ ಪಕ್ಷದ ಶಕ್ತಿ ಕ್ಷೀಣಿಸುತ್ತದೆ. ಬಿಜೆಪಿ ಮತೀಯವಾದಿ ಹಾಗೂ ಕೋಮುವಾದಿ ಪಕ್ಷ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದೆ. ಪಕ್ಷದಲ್ಲಿ ದೊಡ್ಡ ಮಟ್ಟದ ನಾಯಕರು ಸಹ ಇದ್ದಾರೆ. ಆದರೆ, ಇದುವರೆಗೂ ಇವರು ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿಲ್ಲ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕಾರಣದಿಂದಾಗಿಯೇ ಹೈಕಮಾಂಡ್ನವರು ಆಯ್ಕೆ ತಡ ಮಾಡಿದ್ದಾರೆ. ಮೈತ್ರಿಯ ಮೇಲೆ ಈ ಎರಡು ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಯಬಹುದು ಎಂದು ಸಂಸದ ಬಚ್ಚೇಗೌಡ ಶಂಕಿಸಿದ್ದಾರೆ.