ಮಡಿಕೇರಿ:
ಅತ್ತೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಸೊಸೆಯನ್ನು ಬಂಧಿಸಿದ್ದಾರೆ. ಮಡಿಕೇರಿ ತಾಲೂಕು ಮರಗೋಡಿನ ನಿವಾಸಿ ಐಮಂಡ ಪೂವಮ್ಮ (73) ಅವರನ್ನು ಸೊಸೆ ಬಿಂದು (23) ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾಳೆ.
ಶಿಕ್ಷಕರಾಗಿರುವ ಬಿಂದು ಪತಿ ಪ್ರಸನ್ನ ಏಪ್ರಿಲ್ 15ರಂದು ಮೌಲ್ಯಮಾಪನ ಕರ್ತವ್ಯಕ್ಕೆಂದು ಮಡಿಕೇರಿಗೆ ತೆರಳಿದ್ದರು. ಈ ವೇಳೆ ಉಪಾಹಾರ ಮಾಡುವ ಕುರಿತು ಅತ್ತೆ, ಸೊಸೆ ನಡುವೆ ಜಗಳ ಆರಂಭವಾಗಿದೆ. ಕೋಪಗೊಂಡ ಸೊಸೆ ಬಿಂದು ಮೊಬೈಲ್ನಿಂದ ತನ್ನ ಅತ್ತೆ ಪೂವಮ್ಮ ಅವರ ತಲೆಯ ಹಿಂಭಾಗಕ್ಕೆ ಹೊಡೆದು ಕೋಣೆಯಿಂದ ಹೊರ ಬಂದಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ಐಮಂಡ ಪೂವಮ್ಮ ಮೃತಪಟ್ಟಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಬಿಂದು, ಕುಸಿದು ಬಿದ್ದು ಅತ್ತೆ ಮೃತಪಟ್ಟಿದ್ದಾರೆ ಎಂದು ಬಿಂಬಿಸಿ, ಅಂತ್ಯಕ್ರಿಯೆ ನೆರವೇರಿಸಿದ್ದರು. ಪೂವಮ್ಮ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇದ್ದ ಕಾರಣ ಬಿಂದು ಮಾತನ್ನು ಎಲ್ಲರೂ ನಿಜವೆಂದು ನಂಬಿದ್ದರು. ಆದರೆ ಪತ್ನಿ ವರ್ತನೆಯಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿದ ಪತಿ ಪ್ರಸನ್ನ ಏ. 28ರಂದು ದೂರು ನೀಡಿದ್ದರು. ತನಿಖೆ ಕೈಗೊಂಡು ಇದೀಗ ಪೊಲೀಸರು ಸೊಸೆ ಬಿಂದು ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.