ರಾಜಮುಂದ್ರಿ: ಸ್ವಂತ ಮಗನನ್ನೇ ಕೊಲ್ಲಲು 1.30 ಲಕ್ಷ ಸುಪಾರಿ ನೀಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
ಪೂರ್ವ ಗೋದಾವರಿ ಜಿಲ್ಲೆಯ ಬಿಕ್ಕವೋಲೆಯಲ್ಲಿ ಈ ಘಟನೆ ವರದಿಯಾಗಿದ್ದು ಸುಪಾರಿ ದಾಳಿಯಿಂದ ವ್ಯಕ್ತಿ ಬದುಕುಳಿದಿದ್ದಾನೆ. ಮಹಿಳೆಯಲ್ಲದೆ, ಅಪರಾಧದಲ್ಲಿ ಭಾಗಿಯಾದ ಇತರ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.
ಕಾಕಿನಾಡ ಜಿಲ್ಲೆಯ ಕರಪ ಮಂಡಲದ ಪ್ರಮುಖ ಆರೋಪಿ ಕನಕ ದುರ್ಗಾ, ತನ್ನ ಮಗ ವೀರವೆಂಕಟ ಶಿವಪ್ರಸಾದನ ಕಿರುಕುಳದಿಂದ ಬೇಸತ್ತು ಕೊಲೆ ಮಾಡಲು ಗುತ್ತಿಗೆ ಹಂತಕನನ್ನು ನೇಮಿಸಿಕೊಂಡಿದ್ದಳು ಎಂದು ಬಿಕ್ಕವೋಲ್ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಬುಜ್ಜಿ ಬಾಬು ತಿಳಿಸಿದ್ದಾರೆ.
ವೀರವೆಂಕಟ ಶಿವಪ್ರಸಾದ ವಿವಾಹಿತನಾಗಿದ್ದು, ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಆತ ತನ್ನ ಪತ್ನಿಯೊಂದಿಗೆ ಭಿನ್ನಾಭಿಪ್ರಾಯ ಬೆಳೆಸಿಕೊಂಡು ತಾಯಿಯೊಂದಿಗೆ ವಾಸವಾಗಿದ್ದಾನೆ. ದೀರ್ಘಕಾಲದಿಂದ ಮದ್ಯವ್ಯಸನಿಯಾಗಿದ್ದ ಈತ ಕುಡಿದು ಮನೆಗೆ ಬಂದು ತಾಯಿಗೆ ಥಳಿಸುತ್ತಿದ್ದ. ಅವನ ಕಿರುಕುಳದಿಂದ ಬೇಸರಗೊಂಡ ತಾಯಿ ತನ್ನ ಮಗನೇ ಆದರೂ ಆತನನ್ನು ಕೊಲ್ಲಿಸಲು ಸುಪಾರಿ ನೀಡಲು ನಿರ್ಧರಿಸಿ ತನ್ನ ದೂರದ ಸಂಬಂಧಿಯಾದ ಏಳುಕೊಂಡಲು ಎಂಬುವವರಿಗೆ ಈ ಕೆಲಸವನ್ನು ಒಪ್ಪಿಸಿದ್ದಾಳೆ.
ಏಳುಕೊಂಡಲು, ವೀರ ವೆಂಕಟ ಸತ್ಯನ್ನಾರಾಯಣ ಜೊತೆಗೆ ಮಾತುಕತೆ ನಡೆಸಿದರು. ಶಿವ ಪ್ರಸಾದ್ ಅವರನ್ನು ಕೊಲ್ಲಲು 1.50 ಲಕ್ಷಕ್ಕೆ ಬೇಡಿಕೆಯಿಟ್ಟರು. ಕನಕ ದುರ್ಗಾ 1.30 ಲಕ್ಷ ಪಾವತಿಸಲು ಒಪ್ಪಿಕೊಂಡರು. ನಂತರ ಸತ್ಯನ್ನಾರಾಯಣ ಮತ್ತು ಬೋಳೆಂ ವಂಶಿಕೃಷ್ಣ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿ ಶಿವಪ್ರಸಾದ್ನನ್ನು ಬಿಕ್ಕವೋಲೆಯ ಹೊರವಲಯದಲ್ಲಿ ಕೊಂದುಹಾಕಲು ಯೋಜನೆ ರೂಪಿಸಿದರು. ಸತ್ಯನಾರಾಯಣನ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಶಿವಪ್ರಸಾದ ಸತ್ತಿದ್ದಾನೆ ಎಂದು ಭಾವಿಸಿ ಅಲ್ಲಿಂದ ತೆರಳಿದ್ದಾರೆ.
ಆದರೆ, ರೈಲ್ವೇ ಗಾರ್ಡ್, ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಶಿವ ಪ್ರಸಾದನನ್ನು ಕಂಡು ಕಾಕಿನಾಡದ ಜಿಜಿಎಚ್ಗೆ ಸ್ಥಳಾಂತರಿಸಿದರು. ಪೊಲೀಸರು, ವಿಚಾರಣೆ ವೇಳೆ ಕನಕ ದುರ್ಗಾಳನ್ನು ವಿಚಾರಣೆ ಮಾಡಿದ್ದು, ಆಕೆ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. (ಏಜೆನ್ಸೀಸ್)