ಶಿರಸಿ: ಶಾಲೆ – ಕಾಲೇಜ್ಗಳು ಅಧಿಕೃತವಾಗಿ ಆರಂಭವಾದ ನಂತರ ಎಲ್ಲ ಗ್ರಾಮೀಣ ಭಾಗದಲ್ಲೂ ಸಾರಿಗೆ ಸಂಚಾರ ಆರಂಭಿಸಲಾಗುವುದು ಎಂದು ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಹೇಳಿದರು.
ಶನಿವಾರ ನಗರದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಈಗಾಗಲೇ ಸಂಸ್ಥೆಯು ಬಸ್ಗಳ ಸಂಚಾರ ಆರಂಭಿಸಿದೆ. ಬೇಡಿಕೆಯಿಲ್ಲದ ಕಾರಣ ಗ್ರಾಮೀಣ ಭಾಗದಲ್ಲಿ ಬಸ್ಗಳ ಓಡಾಟ ನಡೆಸಿಲ್ಲ. ಆದರೆ, ಕಾಲೇಜ್ಗಳು ಆರಂಭವಾದ ಬಳಿಕ ಪಾಸ್ಗಳನ್ನು ನೀಡಿ, ಗ್ರಾಮೀಣ ಭಾಗಕ್ಕೆ ಸಾರಿಗೆ ಸಂಚಾರ ಕಲ್ಪಿಸಲಾಗುವುದು ಎಂದರು.
ಕರೊನಾ ಪೂರ್ವದಲ್ಲಿ ಸಂಸ್ಥೆಯಿಂದ 4600 ಬಸ್ಗಳನ್ನು ಬಿಡಲಾಗುತ್ತಿತ್ತು. ಅಂದಾಜು 17 ಲಕ್ಷ ಕಿ.ಮೀ ಪ್ರತಿ ದಿವಸ ಸಂಚಾರವಿತ್ತು. 22 ಲಕ್ಷ ಪ್ರಯಾಣಿಕರು ಸಂಚಾರ ಕೈಗೊಳ್ಳುತ್ತಿದ್ದರು. ಆದರೆ, ಈಗ 3800 ಬಸ್ಗಳನ್ನು ಬಿಡುತ್ತಿದ್ದು, 12 ಲಕ್ಷ ಕಿ.ಮೀ. ಓಡಾಟ ಹಾಗೂ 10 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಹಾಗಾಗಿ ಶಾಲೆಗಳು ಆರಂಭಗೊಂಡ ನಂತರ ಬಸ್ಗಳ ಸಂಚಾರ ಹೆಚ್ಚಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು. ಪ್ರತಿ ದಿನ 1.5 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಡೀಸೆಲ್ ದರ ಏರಿಕೆ ಕಂಡರೂ ಬಸ್ನ ಪ್ರಯಾಣ ದರ ಏರಿಕೆ ಮಾಡದ ಕಾರಣ ಸಂಸ್ಥೆ ಸಾಕಷ್ಟು ನಷ್ಟದಲ್ಲಿದೆ. ಇದರಿಂದ ಸರ್ಕಾರಕ್ಕೆ 1100 ಕೋಟಿ ರೂಪಾಯಿ ಅನುದಾನ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ನಿವೃತ್ತರಾದ ಸಿಬ್ಬಂದಿ ಪಿಂಚಣಿ ಹಣವನ್ನೂ ನೀಡಬೇಕಾಗಿದೆ ಎಂದರು.
ಶಿರಸಿ ಹಳೆಯ ಬಸ್ ನಿಲ್ದಾಣ ಮರುನಿರ್ವಣ ಯೋಜನೆಗೆ 7 ಕೋಟಿ ರೂಪಾಯಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆಯಿದೆ. ನಂತರ ಮುಖ್ಯಮಂತ್ರಿ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು. ಅಲ್ಲದೆ, ತಾತ್ಕಾಲಿಕವಾಗಿ ನಿಲ್ದಾಣ ಸುಧಾರಿಸಲು ವಿಭಾಗೀಯ ನಿಯಂತ್ರಣಾಧಿಕಾರಿ ಬಳಿ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.