ವಿಜಯಪುರ: ಹಿರಿಯ ನಾಗರಿಕರು ಸುಖಮಯ ಜೀವನ ನಡೆಸಲು, ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ತೃಪ್ತಿಯಿಂದ ಜೀವನ ಸಾಗಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ರಾಜಶೇಖರ ಧೈವಾಡೆ ಹೇಳಿದರು.
ನಗರದ ರೋಟರಿ ಪ್ರೋಬಸ್ ಕ್ಲಬ್ನಲ್ಲಿ ಸೋಮವಾರ ನಡೆದ ಹಿರಿಯ ನಾಗರಿಕರ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
60 ವರ್ಷ ದಾಟಿದ ಹಿರಿಯರು ತಮ್ಮ ಕಚೇರಿಗೆ ಆಧಾರ್ ಕಾರ್ಡ್ ಹಾಗೂ ಅದರ ಜೊತೆ ಲಿಂಕ್ ಇರುವ ಮೊಬೈಲ್ ತೆಗೆದುಕೊಂಡು ಬಂದರೆ, ಒಂದು ಗಂಟೆಯೊಳಗೆ ಅವರಿಗೆ ಹಿರಿಯ ನಾಗರಿಕರ ಕಾರ್ಡ್ ಮಾಡಿಕೊಡಲಾಗುವುದು ಎಂದರು.
ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯರು ಮಾಸಿಕ ಪಿಂಚಣಿಗೆ ಅರ್ಹರು. ಜಿಲ್ಲಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗಾಗಿಯೇ ವಿಶೇಷ ವಾರ್ಡ್ ಇದೆ. ಹಿರಿಯ ನಾಗರಿಕರ ಮನರಂಜನೆಗಾಗಿ ಜಲನಗರದಲ್ಲಿ ಡೇ ಕೇರ್ ಕೇಂದ್ರ ಇದೆ. ಹಿರಿಯರು ಇವುಗಳ ಪ್ರಯೋಜನ ಪಡೆಯಲು ಕೋರಿದರು.
ಹೆಚ್ಚಿನ ಮಾಹಿತಿಗಾಗಿ 1090 ಹಾಗೂ ಟೋಲ್ ಫ್ರೀ 14567ಕ್ಕೆ ಸಂಪರ್ಕಿಸಬಹುದೆಂದು ಕೋರಿದರು.
ವೇದಿಕೆಯ ಅಧ್ಯಕ್ಷ ವಿಠಲ ತೇಲಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ಸಜ್ಜನ ಪ್ರಾರ್ಥಿಸಿದರು. ಎಸ್.ಸಿ. ಹಿರೆಮಠ ಸ್ವಾಗತಿಸಿದರು. ಕೊನೆಯಲ್ಲಿ ವೇದಿಕೆಯ ಉಪಾಧ್ಯಕ್ಷ ಸಾಹಿತಿ ಸುಭಾಸ ಯಾದವಾಡ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಹಾದೇವ ಹಾಲಳ್ಳಿ ನಿರೂಪಿಸಿದರು.