ಕೋಳಿಕೋಡ್: ಪಾಲಕ್ಕಾಡ್ನಲ್ಲಿ ಸ್ಫೋಟಕ ತುಂಬಿದ ಪೈನಾಪಲ್ ತಿಂದ ಗರ್ಭಿಣಿ ಆನೆಯ ದುರಂತ ಸಾವು ಮನುಷ್ಯ-ಪ್ರಾಣಿಗಳ ಮಧ್ಯೆ ನಡೆಯುತ್ತಿರುವ ಘರ್ಷಣೆಗಳ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕುತ್ತಿರುವ ಬೆನ್ನಲ್ಲೆ, ವಿಕಾರಗೊಂಡ ಮುಖ ಹೊತ್ತು, ಕೀವು, ಗಾಯದಿಂದ ನೋವು ಅನುಭವಿಸುತ್ತಿರುವ ಕೋತಿಯೊಂದು ವೈನಾಡಿನಲ್ಲಿ ಕಾಣಿಸಿಕೊಂಡಿದೆ. ಅಪಘಾತದಿಂದಾಗಿ ಕೋತಿ ಈ ಪರಿ ಗಾಯಗೊಂಡಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಗರ್ಭಿಣಿ ಆನೆಗೆ ಸ್ಫೋಟಕ ತುಂಬಿದ ಪೈನಾಪಲ್ ತಿನ್ನಲು ಕೊಟ್ಟ ಜನರು; ದಾರುಣವಾಗಿ ಮೃತಪಟ್ಟ ಮುಗ್ಧ ಪ್ರಾಣಿ
ಮುತಂಗಾದ ಕೋವಿಡ್-19 ರೋಗಿಗಳ ಆರೈಕೆ ಕೇಂದ್ರದ ಬಳಿ ಕೋತಿಗಳ ಗುಂಪಿನ ಮಧ್ಯೆ ಗಮನ ಸೆಳೆದ ಈ ಕೋತಿ ತನ್ನ ಬಲ ಕಣ್ಣು ಮತ್ತು ಮೂಗನೇ ಕಳೆದುಕೊಂಡಿದೆ. ಮುಖದ ಒಂದು ಭಾಗ ಅಗಲವಾದ ರಂಧ್ರದಂತೆ ಕಾಣುತ್ತದೆ.
ವಯನಾಡ್ ನ ಫೋಟೊ ಜರ್ನಲಿಸ್ಟ್ ಎನ್.ಪಿ. ಜಯನ್ ಜೂನ್ 4 ರಂದು ಈ ಕೋತಿಯ ಚಿತ್ರ ಸೆರೆಹಿಡಿದು ಅದನ್ನು ಅರಣ್ಯ ಇಲಾಖೆಗೆ ಅದನ್ನು ಕಳುಹಿಸಿದ್ದಾರೆ. “ಅದರ ಒಂದು ಕೈ ತೀವ್ರವಾಗಿ ಗಾಯಗೊಂಡಿದ್ದು, ಕೀವು ತುಂಬಿದೆ. ಇದಕ್ಕೆ ಇತರ ಕೋತಿಗಳಂತೆ ಚಲಿಸಲು ಸಾಧ್ಯವಾಗುತ್ತಿಲ್ಲ” ಎಂದು ಜಯನ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಗಾಯಗೊಂಡ ಮಂಗನ ಚಿತ್ರವನ್ನು ಸ್ವೀಕರಿಸಿದ ವಯನಾಡ್ ವನ್ಯಜೀವಿ ರಕ್ಷಕ ಪಿ ಕೆ ಆಸಿಫ್, ಚಿತ್ರವನ್ನು ಮುತಂಗ ಶ್ರೇಣಿ ಅಧಿಕಾರಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಕೋತಿಯ ಈ ದುಃಸ್ಥಿತಿಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಆದರೆ ಈ ಕುರಿತು ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.
“ಕಳೆದ ಎರಡು ದಿನಗಳಿಂದ ಸುಲ್ತಾನ್ ಬ್ಯಾಥರೆಯ ಮೂಲಂಕಾವ್ ಬಳಿ ಚಿರತೆಯನ್ನು ಪತ್ತೆಹಚ್ಚುವ ಕಾರ್ಯ ನಡೆದಿತ್ತು, ಈಗ ಕೋತಿಯ ಬಗ್ಗೆ ತನಿಖೆ ಪ್ರಾರಂಭವಾಗಿದೆ ಎಂದು ಆಸಿಫ್ ಹೇಳಿದ್ದಾರೆ.
ಇದನ್ನೂ ಓದಿ: ನಾವು ಮನುಷ್ಯರಾಗೋದು ಯಾವಾಗ? ಗರ್ಭಿಣಿ ಆನೆ ಸಾವಿಗೆ ಸ್ಯಾಂಡಲ್ವುಡ್ ಸಂತಾಪ
ಏತನ್ಮಧ್ಯೆ, ವನ್ಯಜೀವಿ ವೀಕ್ಷಕರು ಗಾಯಕ್ಕೆ ಕಾರಣವಾಗಿರಬಹುದಾದ ವಿವಿಧ ಸಾಧ್ಯತೆಗಳನ್ನು ಸೂಚಿಸಿದ್ದಾರೆ. “ವಾಹನವೊಂದು ಹಾಯ್ದುಹೋಗಿ, ಮಂಗ ಗಾಯಗೊಂಡಿರಬಹುದು” ಎಂದು ಜಯನ್ ಹೇಳಿದ್ದಾರೆ.
ತೋಟ-ಗದ್ದೆಗಳಿಗೆ ದಾಳಿ ಇಡುತ್ತವೆ ಎಂಬ ಕಾರಣಕ್ಕೆ ವನ್ಯಜೀವಿಗಳನ್ನು ದೂರವಿಡಲು ಅನೇಕ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಹಾಕಿರುವ ಬಲೆಗೆ ಕೋತಿ ಸಿಲುಕಿರುವ ಸಾಧ್ಯತೆಗಳೂ ಇವೆ.
ಏತನ್ಮಧ್ಯೆ, ಕೋತಿಗಳು ಮತ್ತು ಕಾಡುಹಂದಿಗಳು ಕೃಷಿ ಹಾಗೂ ಜನಜೀವನಕ್ಕೆ ಅಪಾಯವನ್ನುಂಟುಮಾಡುತ್ತಿವೆ. ಇವುಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಸರ್ಕಾರ ಅವುಗಳನ್ನು ಉಪದ್ರವಕಾರಿ ಪ್ರಾಣಿಗಳೆಂದು ಘೋಷಿಸಬೇಕು ಎಂದು ವಯನಾಡ್ ರೈತರು ಮತ್ತು ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ನಿರ್ದಿಷ್ಟ ಅವಧಿಯಲ್ಲಿ ಅವುಗಳನ್ನು ಕೊಲ್ಲಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮಾನವೀಯತೆ ಮರೆತು ಗರ್ಭಿಣಿ ಆನೆ ಕೊಂದ ದುಷ್ಟರಿಗೆ ಮುಂದೆ ಕಾದಿದೆ ಮಾರಿಹಬ್ಬ