ಮೊಳಕಾಲ್ಮೂರು: ಉನ್ನತ ಶಿಕ್ಷಣಕ್ಕೆ ಎಸ್ಸೆಸ್ಸೆಲ್ಸಿ ದಿಕ್ಸೂಚಿಯಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ನಂದೀಶ್ವರ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಶುಕ್ರವಾರ ತಾಲೂಕಿನ 30 ಪ್ರೌಢಶಾಲೆಗಳ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಾಧಿಸಬೇಕೆಂಬ ಛಲ, ಆತ್ಮಸ್ಥೈರ್ಯ ಇರಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಆವಿಷ್ಕಾರಗಳ ಕುರಿತು ತಿಳಿದುಕೊಳ್ಳಬೇಕು. ಗುರುಗಳ ಮಾರ್ಗದರ್ಶನ ಮೂಲಕ ಕಲಿಕೆಯಲ್ಲಿ ಪರಿಪೂರ್ಣತೆ ಸಾಧಿಸಿ ಪರೀಕ್ಷೆ ಬರೆಯಬೇಕು ಎಂದರು.
ಹಿಂದೆ ಗುರುಕುಲಗಳಲ್ಲಿ ಮಕ್ಕಳಿಗೆ ಕಠಿಣ ತರಬೇತಿ ನೀಡುತ್ತಿದ್ದರು. ಕಲಿಕೆ ವೇಳೆ ಏಕಾಗ್ರತೆ ಮುಖ್ಯ. ಸಮಾಜ ಸುಧಾರಣೆಗೆ ಶ್ರಮಿಸಿದ ಸಾಧಕರ ಬದುಕು ನಮಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಬಿಇಒ ಎಂ.ಸೋಮಶೇಖರ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ಹೊಸ ಹೊಸ ಪ್ರಯೋಗಗಳಲ್ಲಿ ವಿದ್ಯಾರ್ಥಿಗಳ ನಡುವೆ ಪೈಪೋಟಿ ಏರ್ಪಟ್ಟಿರುವುದು ಸಂತೋಷದ ವಿಚಾರ. ವರ್ಷ ಪೂರ್ತಿ ಶಾಲೆಗಳಲ್ಲಿ ಪಾಠ, ಪ್ರವಚನ, ಕಿರು ಪರೀಕ್ಷೆ ನಡೆಸುವ ಮೂಲಕ ಉತ್ತಮ ಫಲಿತಾಂಶಕ್ಕೆ ಶ್ರಮಿಸಬೇಕು ಎಂದರು.
ವಿವಿಧ ಶಾಲೆಗಳ ಶಿಕ್ಷಕರಾದ ಎಂ.ಮಲ್ಲಿಕಾರ್ಜುನ, ಡಿ.ವಿ.ಕೃಷ್ಣಮೂರ್ತಿ, ಎ.ಷಣ್ಮುಖಪ್ಪ, ಟಿ.ಎಂ.ಕಲ್ಲೇಶ್, ಮಂಜುನಾಥ, ಲತೀಫ್ ಮಾಸ್ತರ್, ಜಿ.ರಾಜಶೇಖರ, ವೀರಪ್ಪ, ರಾಜಣ್ಣ, ಇಸಿಒ ಓಂಕಾರಪ್ಪ ಇದ್ದರು.
ಧಾರವಾಡ ಬಾಲವಿಕಾಸ ಅಕಾಡೆಮಿ, ರಾಣೇಬೆನ್ನೂರಿನ ನಂದೀಶ್ವರ ನೈಪುಣ್ಯ ಶಿಕ್ಷಣ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.