ಮೊಳಕಾಲ್ಮೂರು: ಪ್ಲಾಸ್ಟಿಕ್ ಕೊಡ, ಚೇರು, ಮಂಚ, ಟೇಪು. ಏರ್ಪಿನ್ ಮಾರಿ ಹೊಟ್ಟೆ ತುಂಬಿಸಿಕೊಳ್ಳವುದೇ ನಮ್ಮ ನಿತ್ಯದ ಬದುಕಾಗಿದೆ.
ಲಾಕ್ಡೌನ್ ಆದೇಶದಿಂದ ಊರು ಬಿಟ್ಟು ಹೊರ ಹೋಗದಂತೆ ಗ್ರಾಮಾಡಳಿತ ಎಚ್ಚರಿಸಿದೆ. ಹೊಟ್ಟೆಗೆ ಹಿಟ್ಟಿಲ್ಲದೆ ಬದುಕುವುದು ಹೇಗೆ..? ನಮಗೆ ಊಟ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ…
ಹೀಗಂತ ತಾಲೂಕಿನ ರಾಂಪುರ ಸಮೀಪದ ಗುಡಾರದಲ್ಲಿ ವಾಸ್ತವ್ಯ ಹೂಡಿರುವ ಅಲೆಮಾರಿಗಳು, ತಮ್ಮನ್ನು ಭೇಟಿಯಾಗಲು ಬಂದಿದ್ದ ತಹಸೀಲ್ದಾರ್ ಅವರ ಬಳಿ ಅಳಲು ತೋಡಿಕೊಂಡರು.
ಅಲೆಮಾರಿಗಳ ಸಮಸ್ಯೆ ಆಲಿಸಿದ ತಹಸೀಲ್ದಾರ್ ಎಂ.ಬಸವರಾಜ್, 30 ಕುಟುಂಬಗಳಿಗೂ ನಿತ್ಯ ಜೀವನಕ್ಕೆ ಬೇಕಾದ ಅಕ್ಕಿ, ಎಣ್ಣೆ, ಬೇಳೆ, ಸಾಂಬರ್ ಪದಾರ್ಥ ಇತ್ಯಾದಿ ಸಾಮಗ್ರಿ ಕೊಡಿಸುವ ಭರವಸೆ ನೀಡಿದರು.
ತಾಪಂ ಇಒ ಪ್ರಕಾಶ್, ಕಂದಾಯ ಅಧಿಕಾರಿ ಗೋಪಾಲ್, ಪಿಡಿಒ ಪಾಪನಾಯಕ, ಕುಮಾರಸ್ವಾಮಿ, ಗುಂಡಪ್ಪ, ವೆಡ್ಸ್ ಸಂಸ್ಥೆ ಕಾರ್ಯದರ್ಶಿ ಗಂಗಾಧರ ಮತ್ತಿತರರಿದ್ದರು.