ಮೊಳಕಾಲ್ಮೂರು: ತಾಲೂಕಿನ ಮುತ್ತಿಗಾರಹಳ್ಳಿ, ಮಾರಮ್ಮನಹಳ್ಳಿ ಗೋಶಾಲೆ ನಿರ್ವಹಣೆ ಕೈಗೊಂಡಿದ್ದ ನಮಗೆ ಈತನಕ ಕೂಲಿ ನೀಡಿಲ್ಲವೆಂದು ಆರೋಪಿಸಿ ಕೆಲಸಗಾರರು ಬುಧವಾರ ಸಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಎಂ.ಬಸವರಾಜ್ಗೆ ಮನವಿ ಸಲ್ಲಿಸಿದರು.
2018ರ ಡಿಸೆಂಬರ್ನಿಂದ ಮುತ್ತಿಗಾರಳ್ಳಿ ಗೋಶಾಲೆಯಲ್ಲಿ 15 ಜನ, ಮಾರಮ್ಮಹಳ್ಳಿ ಗೋಶಾಲೆಯಲ್ಲಿ 21 ಕಾರ್ಮಿಕರು ಜಾನುವಾರುಗಳಿಗೆ ಮೇವು, ನೀರು ಪೂರೈಕೆ, ಆರೈಕೆ ಮತ್ತು ಸಗಣಿ ಎತ್ತುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ದಿನಕ್ಕೆ 250 ರೂ. ನಂತೆ ಐದಾರು ತಿಂಗಳ ಕೂಲಿ ಬಾಕಿ ಉಳಿಸಿಕೊಳ್ಳಲಾಗಿದೆ. ಕೇಳಿದರೆ ಇಂದು ನಾಳೆ ಎಂದು ಕಾಲ ದೂಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದ್ದು, ಕೂಡಲೇ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಕೂಲಿಕಾರರಾದ ಮಹಾದೇವಿ, ಚಂದ್ರಮ್ಮ,ಪಾಲಮ್ಮ, ಮಾರಕ್ಕ, ಲಕ್ಷ್ಮೀದೇವಿ, ಪಾರ್ವತಮ್ಮ, ಪಾಲಕ್ಕ, ಸಿಪಿಐ ತಾಲೂಕು ಕಾರ್ಯದರ್ಶಿ ಜಾಫರ್ ಜಾಫರ್, ಕಾಮಯ್ಯ, ಕೃಷ್ಣ, ನಾಗರಾಜ, ಧನಂಜಯ್ಯ ಇದ್ದರು.