ಮೊಳಕಾಲ್ಮೂರು: ವರ್ಷವಿಡೀ ರಜೆ ಇಲ್ಲದೆ ಪಟ್ಟಣದ ಶುಚಿತ್ವ ಕಾರ್ಯದಲ್ಲಿ ತೊಡಗಿಕೊಳ್ಳುವ ಪೌರಕಾರ್ಮಿಕರ ಸೇವೆ ಅನನ್ಯವಾದುದು ಎಂದು ಸಿವಿಲ್ ನ್ಯಾಯಾಧೀಶೆ ಎಸ್.ನಿರ್ಮಲಾ ಬಣ್ಣಿಸಿದರು.
ನಗರದ ಸಾರ್ವಜನಿಕರ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕರೊನಾ ಮಹಾಮಾರಿಯಿಂದ ಇಡೀ ದೇಶವೆ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲೂ ಕುಟುಂಬವನ್ನು ಲೆಕ್ಕಿಸದೆ ಸಮಾಜದ ಕೊಳೆತೊಳೆಯುವ ಕಾಯಕದಲ್ಲಿ ತೊಡಗಿರುವ ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪಪಂ ಆಡಳಿತವೂ ಇವರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪೌರಕಾರ್ಮಿಕರು, ನೀರಗಂಟಿಗಳು, ವಾಹನ ಚಾಲಕರು ಸೇರಿ 45 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು.
ಪಪಂ ಮುಖ್ಯಾಧಿಕಾರಿ ಎಚ್.ಕಾಂತರಾಜ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಪದ್ಮಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ, ಡಾ.ಮಂಜುನಾಥ್, ಡಾ.ಅಭಿನವ, ಡಾ.ಚನ್ನಬಸವರಾಜ್, ವಕೀಲ ಅನಂತಮೂರ್ತಿ, ಹೆಲ್ತ್ಇನ್ಸ್ಪೆಕ್ಟ್ರ್ ಶ್ರೀನಿವಾಸ, ಹಿರಿಯ ಆರೋಗ್ಯ ಸಹಾಯಕಿ ಸುಧಾ, ಪಪಂ ಸಿಬ್ಬಂದಿ ಅಂಜಿನಪ್ಪ, ಪೆನ್ನೊಬಳಸ್ವಾಮಿ, ಕೃಷ್ಣ ಇದ್ದರು.