More

    ವಿಪಕ್ಷಗಳ ಬೆದರಿಕೆಗೆ ಮೋದಿ ಹೆದರಲ್ಲ

    ಚಿಕ್ಕಮಗಳೂರು: ಕಾಡಿನಲ್ಲಿ ನರಿಗಳು ಘೀಳಿಟ್ಟರೆ ಕಾಡಿನ ರಾಜ ಬೆದರೋದು ಉಂಟಾ? ದೇಶದ ಪ್ರಧಾನಿ ನರೇಂದ್ರ ಮೋದಿ ಅನಭಿಷಿಕ್ತ ರಾಜನಿದ್ದಂತೆ. ಎಲ್ಲ ಬೆದರಿಕೆಗಳನ್ನೂ ಧೈರ್ಯವಾಗಿ ಎದುರಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

    ಪ್ರಜಾಪ್ರಭುತ್ವ ದೇಶದ ಜನರ ಹೃದಯದಲ್ಲಿ ಸ್ಥಾನ ಪಡೆದ ಸಾಮ್ರಾಟ ನರೇಂದ್ರ ಮೋದಿ. ಅಲ್ಲಿ-ಇಲ್ಲಿ ನರಿಗಳು ಘೀಳಿಟ್ರೆ ಹೃದಯ ಸಾಮ್ರಾಟ ಸಿಂಹ ಬೆದರೋದಕ್ಕೆ ಸಾಧ್ಯವಿಲ್ಲ. ನರಿಗಳು ಘೀಳಿಟ್ರೆ ಸಿಂಹ ದಾರಿ ಬದಲಾಯಿಸುವುದಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮೋದಿ ಅವರನ್ನು ಕಂಡರೆ ದೇಶದಲ್ಲಿರುವ ಅನೇಕ ವಿಪಕ್ಷಗಳಿಗೆ ನಡುಕ. ಆದ್ದರಿಂದಲೇ ಬೆಂಗಳೂರಿನಲ್ಲಿ ಸಭೆ ಸೇರುತ್ತಿದ್ದಾರೆ. ಇದಕ್ಕೆಲ್ಲ ಬಿಜೆಪಿ ಹೆದರುವ ಪ್ರಶ್ನೆಯಿಲ್ಲ. ನಮ್ಮ ತಯಾರಿಯಲ್ಲಿ ನಾವಿದ್ದೇವೆ ಎಂದರು.
    ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿತಿಸಿದ ಅವರು, ಮೊದಲು ದೇಶ, ನಂತರ ಪಕ್ಷ, ತದನಂತರ ವ್ಯಕ್ತಿ ಅನ್ನೋ ತತ್ವದ ಮೇಲೆ ನಂಬಿಕೆ ಇಟ್ಟವರು ನಾವು. ನಮ್ಮ ದೇಶ-ತತ್ವದಡಿ ಯಾರು ಬೇಕಾದರೂ ನಮ್ಮ ಜತೆಗೆ ಬರಬಹುದು ಎಂದು ಸ್ಪಷ್ಟಪಡಿಸಿದರು.
    ರಾಜಕಾರಣ ನಿಂತ ನೀರಲ್ಲ: ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ಅದೇ ರೀತಿ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ. ರಾಷ್ಟ್ರದ ಹಿತಾಸಕ್ತಿ, ಮೋದಿ ನೇತೃತ್ವ ಹಾಗೂ ಕೇಂದ್ರ ಸರ್ಕಾರದ ಜನಪರ ಕೆಲಸ ಮೆಚ್ಚಿ ಯಾರು ಬೇಕಾದರೂ ಬಿಜೆಪಿ ಅಥವಾ ಎನ್‌ಡಿಎ ಜತೆ ಬರಬಹುದು ಎಂದರು.
    ಜೆಡಿಎಸ್ ಜತೆ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಮ್ಮ ಹಂತದಲ್ಲಿ ಯಾವ ಚರ್ಚೆಯೂ ಆಗಿಲ್ಲ, ಮೇಲ್ಮಟ್ಟದಲ್ಲಿ ಆಗಿದ್ದರೆ ಅದರ ಬಗ್ಗೆ ಮಾಹಿತಿ ಇಲ್ಲ. ಒಬ್ಬರನ್ನು ದೂರವಿಟ್ಟು ರಾಜಕಾರಣ ಮಾಡುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು ನಾವಲ್ಲ ಎಂದು ತಿಳಿಸಿದರು.
    ಅರ್ಕಾವತಿ ಕಳ್ಳರು ಯಾರೆಂದು ಹೇಳಲಿ: ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಅನುಕೂಲವೇ ಆಯಿತು. ವಿರೋಧ ಪಕ್ಷದ ನಾಯಕ ಇದ್ದಿದ್ದರೆ ಅರ್ಕಾವತಿ ಪ್ರಕರಣವನ್ನು ಹೊರತೆಗೆಯುತ್ತಿದ್ದರು. ಈಗ ಅವರು ನಿಶ್ಚಿಂತೆಯಿಂದ ಇರಬಹುದಲ್ಲ ಎಂದು ಎಂದು ಸಿ.ಟಿ.ರವಿ ಲೇವಡಿ ಮಾಡಿದರು.
    ಅರ್ಕಾವತಿ ಹಗರಣದ ಕಳ್ಳರು ಯಾರೆಂದು ನಾನು ಹಲವು ಬಾರಿ ಪ್ರಶ್ನಿಸಿದ್ದೇನೆ. ಆದರೆ ಇದುವರೆಗೂ ಉತ್ತರ ಕೊಟ್ಟಿಲ್ಲ. 8 ಸಾವಿರ ಕೋಟಿ ರೂ. ಲೂಟಿ ಹೊಡೆದವರು ಯಾರೆಂದು ಕೇಳುತ್ತಲೇ ಇದ್ದೇನೆ, ಉತ್ತರ ಕೊಡಲು ಅವರಿಗೆ ಧೈರ್ಯವಿಲ್ಲ. ಯಾಕೆಂದರೆ ಈಗಿದ್ದವರೇ ಕದ್ದವರು ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts