ನವದೆಹಲಿ : ಒಲಿಂಪಿಕ್ಸ್ನಲ್ಲಿ ರಜತ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಮೀರಾಬಾಯಿ ಚಾನು ಅವರಿಗೆ ಟೋಕಿಯೋಗೆ ತೆರಳುವ ಮುನ್ನ ಅಮೆರಿಕದಲ್ಲಿ ವೈದ್ಯಕೀಯ ಶುಶ್ರೂಷೆ ಮತ್ತು ತರಬೇತಿ ಒದಗಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅನುಕೂಲ ಮಾಡಿಕೊಟ್ಟಿದ್ದರು ಎಂದು ಮಣಿಪುರ ಸಿಎಂ ಎನ್.ಬೈರೆನ್ ಸಿಂಗ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಆಗಮಿಸಿರುವ ಬೈರೆನ್ ಸಿಂಗ್, ಈ ವಾರ ಮೋದಿ ಅವರನ್ನು ಭೇಟಿ ಮಾಡಿದಾಗ ಮೀರಾಬಾಯಿ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ಸೂಚಿಸಿದ್ದಾಗಿ ಎಎನ್ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಮಣಿಪುರದ ಜನರಿಗೆ ಈ ಬಗ್ಗೆ ಬಹಳ ಸಂತೋಷವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಸರ್ವೋನ್ನತ ಕ್ರೀಡಾ ಪುರಸ್ಕಾರಕ್ಕೆ ಹಾಕಿ ದಿಗ್ಗಜ ಮೇಜರ್ ಧ್ಯಾನ್ಚಂದ್ ಹೆಸರು
ಪದಕ ಪಡೆದ ನಂತರ ವೇಯ್ಡ್ಲಿಫ್ಟರ್ ಚಾನು ಅವರನ್ನು ಸನ್ಮಾನಿಸಲು ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆಕೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಲಭಿಸಿದ ಸಹಾಯದ ಬಗ್ಗೆ ಹೇಳಿದರು ಎಂದಿರುವ ಸಿಂಗ್, “ನನಗೆ ಈ ಬಗ್ಗೆ ತಿಳಿದು ಆಶ್ಚರ್ಯವಾಯಿತು. ತಮ್ಮ ಮಸಲ್ ಆಪರೇಷನ್ ಮತ್ತು ಅಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗುವ ಆ ಅವಕಾಶ ಸಿಗದಿದ್ದರೆ, ಈ ಗುರಿ ಸಾಧಿಸಲಾಗುತ್ತಿರಲಿಲ್ಲ ಎಂದು ಚಾನು ಹೇಳಿದರು ಎಂದಿದ್ದಾರೆ.
ಚಾನುಗೆ ಬೆನ್ನು ನೋವು ಉಂಟಾಗುತ್ತಿತ್ತು. ಈ ಬಗ್ಗೆ ಪಿಎಂಒಗೆ ಮಾಹಿತಿ ಸಿಕ್ಕಿದ್ದು, ಪ್ರಧಾನಿ ಮೋದಿ ನೇರವಾಗಿ ಆಸಕ್ತಿ ವಹಿಸಿದರು. ವಿದೇಶದಲ್ಲಿ ಆಕೆಯ ಚಿಕಿತ್ಸೆ ಮತ್ತು ತರಬೇತಿಯ ಎಲ್ಲ ವೆಚ್ಚವನ್ನೂ ಕೇಂದ್ರ ಸರ್ಕಾರ ಭರಿಸಿತು ಎಂದು ಹೇಳಿರುವ ಸಿಂಗ್, “ಮತ್ತೊಬ್ಬ ಅಥ್ಲೀಟ್ಗೂ ಪ್ರಧಾನಿ ಮೋದಿ ಹೀಗೇ ಸಹಾಯ ಮಾಡಿದ್ದಾರೆ. ಈ ಬಗ್ಗೆ ಅವರು ಎಲ್ಲೂ ಪ್ರಸ್ತಾಪ ಮಾಡಿಲ್ಲ, ಇದು ಅವರ ದೊಡ್ಡತನ” ಎಂದಿದ್ದಾರೆ. (ಏಜೆನ್ಸೀಸ್)
ಸಾಧನೆಯ ಪಥದಲ್ಲಿ ನೆರವಾದ ಟ್ರಕ್ ಚಾಲಕರನ್ನು ಸತ್ಕರಿಸಿದ ಮೀರಾಬಾಯಿ ಚಾನು