More

    ಸಂಸದ ಅಂಗಡಿ ನಿಧನಕ್ಕೆ ಪ್ರಧಾನಿ, ಸಿಎಂ ಬಿಎಸ್​ವೈ ಸೇರಿ ಹಲವಾರು ಗಣ್ಯರ ಸಂತಾಪ

    ಬೆಂಗಳೂರು: ಕರೊನಾ ಸೋಂಕಿನಿಂದಾಗಿ ಅಕಾಲಿಕ ಮರಣಕ್ಕೀಡಾಗಿರುವ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಹಾಗೂ ಸಂಸದ ಸುರೇಶ್ ಅಂಗಡಿಯವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯಾದಿಯಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವರು ಸಂತಾಪ ಸೂಚಿಸಿದ್ದಾರೆ.

    ಸುರೇಶ್ ಅಂಗಡಿಯವರು ಅತ್ಯಂತ ವಿಶಿಷ್ಟ ಕಾರ್ಯಕರ್ತರಾಗಿದ್ದು, ಕರ್ನಾಟಕದಲ್ಲಿ ಪಕ್ಷವನ್ನು ಬಲಗೊಳಿಸುವಲ್ಲಿ ಅಪಾರ ಶ್ರಮ ವಹಿಸಿದ್ದರು. ಶ್ರದ್ಧಾವಂತ ಸಂಸದ, ಪರಿಣಾಮಕಾರಿ ಸಚಿವರಾಗಿದ್ದ ಅವರು ಭಾರಿ ಮೆಚ್ಚುಗೆಗೂ ಪಾತ್ರರಾಗಿದ್ದರು. ಅವರ ಅಗಲಿಕೆ ಅತೀವ ದುಃಖ ಉಂಟು ಮಾಡಿದೆ. ಅವರ ಕುಟುಂಬ ಹಾಗೂ ಬಂಧು-ಬಳಗಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಂಗಡಿ ಜತೆ ಪುಟ್ಟ ಹೂಕುಂಡ ಹಸ್ತಾಂತರಿಸಿ ಶುಭಾಶಯ ವ್ಯಕ್ತಪಡಿಸಿದ್ದ ಅಪರೂಪದ ಫೋಟೋವೊಂದನ್ನು ಹಂಚಿಕೊಂಡು ಅವರನ್ನು ವಿಶೇಷವಾಗಿ ಸ್ಮರಿಸಿಕೊಂಡಿದ್ದಾರೆ.

    ಸುರೇಶ್ ಅಂಗಡಿ ಅವರ ಅಗಲಿಕೆಯ ವಿಷಯ ಕೇಳಿ ಆಘಾತವಾಯಿತು. ಪ್ರೀತಿಪಾತ್ರ ನಾಯಕರಾಗಿದ್ದ ಅವರು ತಮ್ಮ ಕ್ಷೇತ್ರವಾದ ಬೆಳಗಾವಿ ಹಾಗೂ ಕರ್ನಾಟಕದ ಜನತೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಸಂತಾಪ ಸೂಚಿಸಿದ್ದಾರೆ.

    “ಹಿರಿಯ ನಾಯಕರು, ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಇದನ್ನು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಸಭ್ಯ, ಸೌಮ್ಯ ಸ್ವಭಾವದವರಾಗಿ, ಜನಪ್ರಿಯ ನಾಯಕರಾಗಿದ್ದ ಸುರೇಶ್ ಅಂಗಡಿಯವರ ನಿಧನ, ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ. ಶ್ರೀ ಸುರೇಶ್ ಅಂಗಡಿಯವರ ಹಠಾತ್ ಅಗಲಿಕೆಗೆ ಅತೀವ ಸಂತಾಪ ವ್ಯಕ್ತಪಡಿಸುತ್ತ, ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಅವರ ಕುಟುಂಬದವರಿಗೆ, ಬಂಧು ವರ್ಗದವರಿಗೆ, ಅಪಾರ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ..” ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

    ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​, ಕೇಂದ್ರ ಸಚಿವರಾದ ಅಮಿತ್ ಷಾ, ಪ್ರಲ್ಹಾದ ಜೋಶಿ, ಪಿಯೂಷ್​ ಗೋಯೆಲ್​, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್​, ಅನುರಾಗ್ ಠಾಕೂರ್​, ಡಾ.ಜಿತೇಂದ್ರ ಸಿಂಗ್, ಸಂಸದರಾದ ಸುಮಲತಾ ಅಂಬರೀಷ್​, ಮೀನಾಕ್ಷಿ ಲೇಖಿ, ರಾಜ್ಯದ ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಶ್ರೀರಾಮುಲು, ಸಿ.ಟಿ.ರವಿ, ಡಾ.ಸಿ.ಎನ್​. ಅಶ್ವತ್ಥನಾರಾಯಣ, ಆರ್.ಅಶೋಕ್​, ಶೋಭಾ ಕರಂದ್ಲಾಜೆ, ಶಾಸಕ ಅರವಿಂದ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯ ಎನ್​.ರವಿಕುಮರ್​, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಸೇರಿ ಹಲವಾರು ಗಣ್ಯರು ಅಂಗಡಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts