ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕೊಲೆಗೆ ಸುಪಾರಿ ನೀಡಿದ್ದ ಪ್ರಕರಣ ಎಲ್ಲರನ್ನೂ ದಂಗಾಗಿಸಿತ್ತು. ಲೀಕ್ ಆಗಿದ್ದ ಆಡಿಯೋದಿಂದಾಗಿ ಶಾಸಕ ಸತೀಶ್ ರೆಡ್ಡಿ ಪ್ರಾಣ ಉಳಿದಿದೆ.
ಬಂಧಿತ ಆರೋಪಿ ಆಕಾಶ್ ನೀಡಿದ್ದ ಮಾಹಿತಿಯನ್ನು ಭೈರೇಶ್ ನೇರವಾಗಿ ಶಾಸಕರ ಆಪ್ತನೋರ್ವನ ಬಳಿ ಹೇಳಿದ್ದಾರೆ. ಇದರಿಂದಾಗಿ ಸತೀಶ್ ರೆಡ್ಡಿ ಬಚಾವಾಗಿದ್ದಾರೆ. ಲೀಕ್ ಆಗಿರುವ ಆಡಿಯೋದಲ್ಲಿ ಇನ್ನೊಂದು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದ್ದು ಶಾಸಕರನ್ನು ಕೊಲೆ ಮಾಡಲು 2 ಕೋಟಿ ರೂ. ಡೀಲಿಂಗ್ ನಡೆಸಲಾಗಿದೆ.
ಬೆಳಗ್ಗಿನ ಜಾವವೇ ಶಾಸಕ ಸತೀಶ್ ರೆಡ್ಡಿಯ ಕೊಲೆ ಮಾಡಲು ಸ್ಕೆಚ್ ತಯಾರಿಸಲಾಗಿತ್ತು. ಶಾಸಕರ ಆಗುಹೋಗುಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನೂ ಆಕಾಶ್ ಹಾಗೂ ಆತನ ಗ್ಯಾಂಗ್ ಪಡೆದಿತ್ತು. ಆದರೆ ಲೀಕ್ ಆದ ಆಡಿಯೋದಿಂದ ಎಂಎಲ್ಎ ಪ್ರಾಣ ಉಳಿದಿದೆ.
ಈ ಆಡಿಯೋದಲ್ಲಿ ಸುಪಾರಿ ಪಡೆದು ಸ್ಕೆಚ್ ಬಗ್ಗೆ ಮಾತನಾಡಲಾಗಿದ್ದು ಸತೀಶ್ ರೆಡ್ಡಿ ಫೋಟೋ ಕಳಿಸಿ ಸುಪಾರಿ ಕೊಟ್ಟಿರುವ ಬಗ್ಗೆ ಇಬ್ಬರು ಮಾತನಾಡಿದ್ದಾರೆ. ಈ ಡೀಲ್ ಕೊಟ್ಟ ವ್ಯಕ್ತಿಗಳ ಬಗ್ಗೆ ಹಾಗೂ ಮುಂದೆ ಏನು ಮಾಡಬೇಕು ಅನ್ನುವುದರ ಬಗ್ಗೆಯೂ ಮಾತನಾಡಿದ್ದಾರೆ.
ಆಡಿಯೋದಲ್ಲಿ ಏನಿದೆ?
ಸತೀಶ್ ರೆಡ್ಡಿಯ ದಿನಚರಿಯನ್ನು ಗಮನಿಸಿ ಎಷ್ಟು ಗಂಟೆಗೆ ಎಲ್ಲೆಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಎನ್ನುವುದನ್ನು ತಿಳಿದುಕೊಂಡಿದ್ದರು. ಬೆಳಗಿನ ಜಾವ ಮೂರು ಗಂಟೆಗೆ ಸತೀಶ್ ರೆಡ್ಡಿ ಎಲ್ಲಿ ಹೋಗುತ್ತಾರೆ ಎನ್ನುವುದನ್ನ ಪ್ರಮುಖವಾಗಿ ಗಮನಿಸಿದ್ದರು.
ಈ ಬಗ್ಗೆ ಆಡಿಯೋದಲ್ಲಿ ಭೈರೇಶ್ ಹಾಗೂ ಚಂದ್ರು ಮಾತನಾಡಿದ್ದು ಸತೀಶ್ ರೆಡ್ಡಿ ಫೋಟೋ ಸಮೇತ ಡೀಲ್ ಕೊಟ್ಟಿರೋ ಮುಖ್ಯ ಆರೋಪಿ ಬಗ್ಗೆಯೂ ಮಾತನಾಡಿದ್ದಾರೆ. ಸುಪಾರಿ ಕೊಟ್ಟಿರುವ ವ್ಯಕ್ತಿಯ ಫೋಟೋ ಕೂಡ ಭೈರೇಶ್ ಕಳಿಸಿದ್ದಾನೆ.
ಈ ಬಗ್ಗೆ ಆಡಿಯೋದಲ್ಲಿ ಅವರಿಬ್ಬರೂ ‘ಇದು ಸೂಕ್ಷ್ಮ ವಿಚಾರ. ಹಾಗಾಗಿ ಸೈಲೆಂಟಾಗಿಯೇ ಕೆಲಸ ಮಾಡಲು ಮಾತುಕತೆ ನಡೆಸಿದ್ದಾರೆ. ಇವರು ಮೂರು ತಿಂಗಳಿಂದ ಸುಪಾರಿ ಬಗ್ಗೆ ಪ್ಲಾನ್ ಮಾಡುತ್ತಿರುವ ಬಗ್ಗೆಯೂ ಉಲ್ಲೇಖ ಆಗಿದ್ದು ಆರೋಪಿಗಳು ಎರಡು ಕೋಟಿಗೆ ಡೀಲಿಂಗ್ ಮಾಡಿದ್ದರು.
ಸದ್ಯ ಬೊಮ್ಮನಹಳ್ಳಿ ಪೊಲೀಸರ ಕೈಗೆ ಈ ಆಡಿಯೋ ಸೇರಿದ್ದು ಡೀಲ್ ಕೊಟ್ಟವರು ಯಾರು, ಎಷ್ಟು ಜನ ಸ್ಕೆಚ್ ಹಾಕಿದ್ದು? ಹೀಗೆ ಅನೇಕ ಆಯಾಮಗಳಲ್ಲಿ ಈ ಬಗ್ಗೆ ಎಲ್ಲವೂ ತನಿಖೆ ಪೊಲೀಸರು ನಡೆಸುತ್ತಿದ್ದಾರೆ