ಗಂಗಾವತಿ: ಪ್ರವಾಸಿ ಕೇಂದ್ರದ ವ್ಯಾಪ್ತಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಲಪಡಿಸಲಾಗುತ್ತಿದ್ದು, ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಇಲಾಖೆಯಿಂದ ಮಂಜೂರಾದ ಆಂಬುಲೆನ್ಸ್ ಸೇವೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಪ್ರವಾಸಿ ಕೇಂದ್ರವಾಗಿರುವ ಆನೆಗೊಂದಿ, ಸಣಾಪುರ, ಸಂಗಾಪುರ, ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಜನರ ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಆಂಬುಲೆನ್ಸ್ ಒದಗಿಸಲಾಗಿದ್ದು, ಚಾಲಕ ಸೇರಿ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಆನೆಗೊಂದಿ ಮತ್ತು ಸಂಗಾಪುರ ಆಸ್ಪತ್ರೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸರ್ಕಾರ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆನೆಗೊಂದಿ ಆಸ್ಪತ್ರೆ ಈ ಹಿಂದೆ ಖಾಸಗಿ ಟ್ರಸ್ಟ್ನೊಂದಿಗೆ ಒಪ್ಪಂದ ಹಿನ್ನೆಲೆಯಲ್ಲಿ ಕಾನೂನು ತೊಡಕು ಎದುರಾಗಿದ್ದವು. ಕಳೆದ ವರ್ಷದಿಂದ ಟ್ರಸ್ಟ್ ಸಹಭಾಗಿತ್ವ ಅವಧಿ ಪೂರ್ಣಗೊಂಡಿದ್ದು, ಸರ್ಕಾರವೇ ಪ್ರಾಥಮಿಕ ಕೇಂದ್ರವನ್ನು ನಿರ್ವಹಿಸುತ್ತಿದೆ ಎಂದರು.
ಬಳಿಕ ಅಭಿವೃದ್ಧಿಗೊಳಿಸಿದ ಗ್ರಂಥಾಲಯ ಮತ್ತು ನವೀಕರಣಗೊಳ್ಳುತ್ತಿರುವ ಗಗನಮಹಲ್ ಕಾಮಗಾರಿ ವೀಕ್ಷಿಸಿದರು. ತಾಲೂಕು ವೈದ್ಯಾಧಿಕಾರಿ ಡಾ.ಶರಣಪ್ಪ ಚಕೋಟಿ, ಬಿಜೆಪಿ ಮುಖಂಡರಾದ ಎಚ್.ಸಿ.ಯಾದವ್, ಚಂದ್ರಶೇಖರ್ ಆನೆಗೊಂದಿ, ಪ್ರವೀಣ, ರುದ್ರೇಶ, ಪದ್ಮನಾಭ್, ಮಂಜುನಾಥಗೌಡ, ಮನೋಹರ ಇತರರಿದ್ದರು.