ಬಿಂದಾಲ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಬಿಜೆಪಿಯ ಹಿರಿಯ ಮುಖಂಡ, ಶಾಸಕ ದೇಬೇಂದ್ರನಾಥ್ ರಾಯ್ ಇಂದು ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೀಗ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಹೆಮತಾಬಾದ್ನ ಶಾಸಕರಾಗಿರುವ ಇವರು, ತಮ್ಮ ಗ್ರಾಮದ ಸಮೀಪವಿರುವ ಬಿಂದಾಲ್ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಂಗಡಿಯೊಂದರ ಬಳಿ ಅವರ ಶವ ಸಿಕ್ಕಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ.
ವರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಕಾರಣವೂ ಇರಲಿಲ್ಲ. ಇದೊಂದು ಕೊಲೆ ಎಂದು ಅವರು ಕುಟುಂಬಸ್ಥರು ಆರೋಪಿಸಿದ್ದಾರೆ. ಕೊಲೆ ಮಾಡಿದ ನಂತರ ನೇಣು ಹಾಕಲಾಗಿದೆ ಎನ್ನುವುದು ಅವರ ಅನಿಸಿಕೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಸಹೋದರ ಜಿತೇಶ್ ಚಂದ್ರ ರಾಯ್, ದೇವೇಂದ್ರ ರಾತ್ರಿ ಸಹಿ ತೆಗೆದುಕೊಳ್ಳುವ ಸಂಬಂಧ ಚಹಾದ ಅಂಗಡಿಗೆ ಬಂದಿದ್ದ. ಮಧ್ಯರಾತ್ರಿ ಸುಮಾರು 1 ಗಂಟೆಯಾಗಿತ್ತು. ವಾಪಸ್ ಬರುವುದಾಗಿ ಹೇಳಿ ಹೋಗಿದ್ದ. ಅದೇ ವೇಳೆ ಅದೇ ದಾರಿಯಲ್ಲಿ ಒಂದು ಬೈಕ್ ಹೋದ ಶಬ್ದವಾಗಿದೆ. ದೇವೇಂದ್ರ ವಾಪಸ್ ಬರದ ಕಾರಣ, ಹೋಗಿ ನೋಡುವಷ್ಟರದಲ್ಲಿ ನೇಣು ಬಿಗಿದಿರುವುದು ಕಂಡಿದೆ’ ಎಂದಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಬಿಜೆಪಿಯಲ್ಲಿ ಗ್ರೂಪಿಸಂ?: ಪಕ್ಷದಿಂದ ದೂರ ಸರಿದ ಶಾಸಕ ಶೈಲಾದಿತ್ಯ ದೇವ್
ಶವವನ್ನು ಮರಣೋತ್ತರ ಪರೀಕ್ಷೆಗೆ ರಾಯ್ಗುಂಜ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಬೇಂದ್ರನಾಥ್ ಅವರು 2019ರಲ್ಲಿ ಬಿಜೆಪಿಗೆ ಸೇರಿದ್ದರು. ಅದಕ್ಕೂ ಮೊದಲು ಅವರು ಸಿಪಿಐ (ಎಂ) ಶಾಸಕರಾಗಿದ್ದರು. ಸಿಪಿಐ(ಎಂ)ನಿಂದ ಹೇಮತಾಬಾದ್ ವಿಧಾನಸಭಾ ವಿಭಾಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಕಾಯ್ದಿರಿಸಿದ ಸ್ಥಾನದಲ್ಲಿ ಚುನಾವಣೆಗೆ ನಿಂತು ಗೆಲುವು ಸಾಧಿಸಿದ್ದರು. ಆದರೆ ಲೋಕಸಭಾ ಚುನಾವಣೆಯ ನಂತರ ಕಳೆದ ವರ್ಷ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಆರೋಪಿಸಿದೆ. ದೇಬೇಂದ್ರನಾಥ್ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದು ಕೊಲೆಯಾಗಿದ್ದು, ಇದರ ಹಿಂದೆ ತೃಣಮೂಲ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ರಾಹುಲ್ ಸಿನ್ಹಾ, ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸರ್ಕಾರವನ್ನು ಕೋರಿದ್ದಾರೆ.