ಕಡೂರು: ಸರಸ್ವತಿಪುರ ಗ್ರಾಮ ಸಮಗ್ರ ಅಭಿವೃದ್ಧಿಗೊಳಿಸಲು ಒತ್ತು ನೀಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಶನಿವಾರ ತಾಲೂಕಿನ ಬಿ.ಕಾರೇಹಳ್ಳಿ ಗ್ರಾಮದಲ್ಲಿ 65 ಲಕ್ಷ ರೂ. ಹಾಗೂ ಸರಸ್ವತಿಪುರ ಗ್ರಾಮದಲ್ಲಿ 1.95 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜಿಪಂ ಮುಖ್ಯ ಕೇಂದ್ರ ಬಿಂದುವಾಗಿರುವ ಸರಸ್ವತಿಪುರದಲ್ಲಿ ಹಲವು ಜ್ವಲಂತ ಸಮಸ್ಯೆಗಳು ಹಾಗೆಯೇ ಉಳಿದಿರುವುದು ವಿಪರ್ಯಾಸ. ಈಗಾಗಲೇ ಗ್ರಾಮದಲ್ಲಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ 20 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಈ ಭಾಗದಲ್ಲಿ ಮುಖ್ಯವಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸರಸ್ವತಿಪುರದಿಂದ ಚೆನ್ನೇನಹಳ್ಳಿ ಗ್ರಾಮದ ರಸ್ತೆ ತೀರ ಹದಗೆಟ್ಟಿತ್ತು. ಅದರ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇಲ್ಲಿನ ಗ್ರಾಪಂ ಕಟ್ಟಡ ದುರಸ್ತಿ, ದಾದಿಯರ ಉಪಕೇಂದ್ರ ಮಂಜೂರು ಮುಂತಾದ ಅಗತ್ಯತೆಗಳನ್ನು ಆದ್ಯತೆ ಮೇಲೆ ಪೂರೈಸಲಾಗುವುದು ಎಂದು ಹೇಳಿದರು.
ಕೃಷಿ ಕಾಯಕ ಮಾಡುತ್ತಿರುವ ತೆಲುಗುಗೌಡ ಸಮಾಜದವರು ವಾಸಿಸುತ್ತಿರುವ ಜೋಡಿ ತಿಮ್ಮಾಪುರಕ್ಕೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ರಸ್ತೆಯಿಲ್ಲದಿರುವುದು ದೊಡ್ಡ ಕೊರತೆಯಾಗಿತ್ತು. ಇದೀಗ ಆ ಕೊರತೆಯನ್ನು ಪರಿಹರಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿವರೆಗೆ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ. ಇಲ್ಲಿ ಒಂದೆಡೆ ರೈಲ್ವೆ ಮಾರ್ಗ ಮತ್ತೊಂದೆಡೆ ಹೆದ್ದಾರಿಯಿರುವುದರಿಂದ ಸಮಸ್ಯೆಯಲ್ಲೆ ದಿನದೂಡುವಂತಾಗಿದೆ. ಶೀಘ್ರ ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪಂಚಾಯಿತಿ ಸದಸ್ಯ ಪದ್ಮನಾಭ, ಇಂಜಿನಿಯರ್ ತರುಣ್ ಶಶಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಜೋಡಿತಿಮ್ಮಾಪುರ ನರಸಿಂಹಪ್ಪ, ಪ್ರಮುಖರಾದ ಬೀರೂರು ದೇವರಾಜ್, ಭಂಡಾರಿ ಶ್ರೀನಿವಾಸ್, ಕಲ್ಲೇಶ್, ಎಸ್.ಕೆ.ಚಂದ್ರಪ್ಪ, ಶಾಂತಮ್ಮ, ರುದ್ರೇಗೌಡ, ಸಿ.ವಿ.ಆನಂದ್, ಕಂಸಾಗರ ರೇವಣ್ಣ, ಶಶಿಕುಮಾರ್, ಡಾ. ತವರಾಜು, ಹೊಗರೇಹಳ್ಳಿ ಶಶಿ ಇತರರಿದ್ದರು.