ನವದೆಹಲಿ: ದೇಶದ ಭದ್ರತೆ, ನುಸುಳುವಿಕೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಭಾರತ-ಮ್ಯಾನ್ಮಾರ್ ಗಡಿಗೆ ಬೇಲಿ ಹಾಕುವ ಕೇಂದ್ರದ ಕ್ರಮವನ್ನು ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ವಿರೋಧಿಸಿದ್ದಾರೆ.
ಇದನ್ನೂ ಓದಿ: ಶಾಂತಿ ಕಾಪಾಡುವಂತೆ ರೈತರಿಗೆ ಕೇಂದ್ರ ಮನವಿ.. 5ನೇ ಸುತ್ತಿನ ಮಾತುಕತೆಗೆ ಆಹ್ವಾನ!
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಲಾಲ್ದುಹೋಮ, ಎಫ್ಎಂಆರ್ ಮತ್ತು ಗಡಿ ಬೇಲಿ ಹಾಕಬಾರದೆಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇತ್ತೀಚೆಗೆ ಭೇಟಿಯಾಗಿ ಚರ್ಚಿಸಿದ್ದೇನೆ. ಮ್ಯಾನ್ಮಾರ್ನೊಂದಿಗಿನ 1,643 ಕಿಮೀ ಗಡಿಯಲ್ಲಿ ಕೇಂದ್ರವು ಬೇಲಿ ಹಾಕುವಿಕೆಯನ್ನು ಕೈಗೆತ್ತಿಕೊಂಡರೆ ರಾಜ್ಯವನ್ನು ಹೊರಗಿಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ನಮ್ಮ ಚರ್ಚೆಗಳ ಆಧಾರದ ಮೇಲೆ ಕೇಂದ್ರ ಗೃಹ ಸಚಿವರು ಗಡಿಗೆ ಬೇಲಿ ಹಾಕುವ ಅಥವಾ ಕೈಬಿಡುವುದನ್ನು ಅಥವಾ ಎಫ್ಎಂಆರ್ ಅನ್ನು ಉಳಿಸಿಕೊಳ್ಳುವುದನ್ನು ಸ್ಪಷ್ಟವಾಗಿ ದೃಢೀಕರಿಸಲಿಲ್ಲ. ಈ ಭಾಗದಲ್ಲಿ ಬೇಲಿ ಹಾಕುವುದಿಲ್ಲ ಎಂದು ನಾನು ಆಶಾವಾದಿಯಾಗಿದ್ದೇನೆ. ರಾಜ್ಯದ ಜನ ಭಯಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿಕೊಂಡರು.
ಏತನ್ಮಧ್ಯೆ, ರಾಜ್ಯದ ಅತಿದೊಡ್ಡ ವಿರೋಧ ಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಎಫ್ಎಂಆರ್ ರದ್ದುಗೊಳಿಸುವಿಕೆ ಮತ್ತು ಗಡಿಗೆ ಬೇಲಿ ಹಾಕುವುದನ್ನು ತೀವ್ರವಾಗಿ ವಿರೋಧಿಸಿದೆ. ಇದೇ ವಿಷಯವಾಗಿ ಪ್ರತಿಭಟನೆಗೆ ಇಳಿದಿರುವ ಮಹಿಳೆ, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಗಳ ಒಕ್ಕೂಟ (ಎನ್ಜಿಒಸಿಸಿ) ತೆಗೆದುಕೊಳ್ಳುತ್ತಿರುವ ನಿರ್ಧಾರಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುವುದಾಗಿ ಹೇಳಿದೆ.
ಕೇಂದ್ರದ ನಡೆ ವಿರೋಧಿಸುವಲ್ಲಿ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ಜಡ್ಪಿಎಂ) ಪಕ್ಷದ ಸರ್ಕಾರವು ವಿಫಲವಾಗಿದೆ ಎಂದೂ ಎಂಎನ್ಎಫ್ ಪಕ್ಷ ಆರೋಪಿಸಿದೆ. ನಾಗಾಲ್ಯಾಂಡ್ ಸರ್ಕಾರ ಮತ್ತು ರಾಜ್ಯದ ಎನ್ಜಿಒಗಳು ಎಫ್ಎಂಆರ್ ಮತ್ತು ಗಡಿ ಬೇಲಿ ಹಾಕುವುದನ್ನು ರದ್ದುಗೊಳಿಸುವ ಕ್ರಮವನ್ನು ವಿರೋಧಿಸಿರುವುದು ಗಮನಾರ್ಹವಾಗಿದೆ.
ವಾಸ್ತವವಾಗಿ ಮ್ಯಾನ್ಮಾರ್ನ ಪೂರ್ವ ನಾಗಾ ರಾಷ್ಟ್ರೀಯ ಸಂಸ್ಥೆ (ಇಎನ್ಎನ್ಒ) ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಫೆನ್ಸಿಂಗ್ ಅನ್ನು ನಿರ್ಮಿಸುವ “ಭಾರತದ ಯೋಜನೆ” ಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದೆ.