ಮೈಸೂರು: ಭಾಭಾ ಪರಮಾಣು ಸಂಶೋಧನಾ ಸಂಸ್ಥೆ ವಿಜ್ಞಾನಿಯ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಮೈಸೂರಿನಲ್ಲಿ ನಾಪತ್ತೆಯಾಗಿದ್ದ ವಿಜ್ಞಾನಿ ಆಂಧ್ರದ ವಿಜಯವಾಡದಲ್ಲಿ ಪ್ರತ್ಯಕ್ಷವಾಗಿದ್ದಾರೆ.
ವಿಜಯವಾಡದ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಭಾನುವಾರ ಸಂಜೆ ಸಂಶೋಧನಾ ಕೇಂದ್ರಕ್ಕೆ ಸ್ವತಃ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
24 ವರ್ಷದ ಯುವ ವಿಜ್ಞಾನಿ ಅಭಿಷೇಕ ರೆಡ್ಡಿ ಗುಲ್ಲಾ ಮೈಸೂರಿನ ಹೊರವಲಯದಲ್ಲಿರುವ ಭಾಭಾ ಪರಮಾಣು ಸಂಸ್ಥೆಯಲ್ಲಿ ಸಹಾಯಕ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯವರು. ತಂದೆ ಮತ್ತು ತಾಯಿ ಇಬ್ಬರನ್ನು ಕಳೆದುಕೊಂಡು ಅಕ್ಷರಶಃ ಒಬ್ಬಂಟಿಯಾಗಿದ್ದರು.
ಇದನ್ನೂ ಓದಿ: ಶೋಭಾ ಕರಂದ್ಲಾಜೆಗೆ ಕುಸುಮಾ ತಿರುಗೇಟು
ಅಕ್ಟೋಬರ್ 6ರಂದು ಅಭಿಷೇಕ್ ರೆಡ್ಡಿ ಮನೆಯಿಂದ ಹೊರಹೋದವರು ಮತ್ತೆ ವಾಪಸ್ಸು ಬಂದಿರಲಿಲ್ಲ. ತಂದೆ-ತಾಯಿ ಕಳೆದುಕೊಂಡ ಮೇಲೆ ಮಾನಸಿಕ ಖಿನ್ನತೆ ಮತ್ತು ಮೈಗ್ರೇನ್ನಿಂದ ಬಳಲುತ್ತಿದ್ದರು ಎನ್ನಲಾಗಿದೆ.
ನಾಪತ್ತೆ ಬಗ್ಗೆ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕರೆ ಮಾಡಿರುವ ಅವರು ಇನ್ನೆರಡು ದಿನಗಳ ನಂತರ ವಾಪಸ್ ಬರುವುದಾಗಿ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)