More

    ಅತ್ಯಾಚಾರ ನಡೆಸಿ ವಿಷ ಕುಡಿಸಿದ ಕಿರಾತಕರು

    ಧಾರವಾಡ: ತಾಲೂಕಿನ ಬೋಗೂರ ಗ್ರಾಮದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಘಟನೆ ಇನ್ನೂ ಚರ್ಚೆಯಲ್ಲಿರುವ ಸಂದರ್ಭದಲ್ಲೇ ಇಂತಹ ಮತ್ತೊಂದು ಹೇಯ ಕೃತ್ಯ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ತಾಲೂಕಿನ ಮಾದನಬಾವಿ ಗ್ರಾಮದಲ್ಲೂ 16 ವರ್ಷದ ಬಾಲಕಿ ಮೆಲೆ ಅದೇ ಗ್ರಾಮದ ಯುವಕರು ಮೇ 21ರಂದು ಅತ್ಯಾಚಾರ ನಡೆಸಿದ್ದಾರೆ. ಬಾಲಕಿ ವಿಷ ಸೇವಿಸಿದ್ದಾಳೆ ಎಂದು ಹೇಳಿ ತಾವೇ ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

    ಘಟನೆ ವಿವರ: ಮಾದನಬಾವಿ ಗ್ರಾಮದ ಬಸವರಾಜ ಕಿರಾಳೆ ಹಾಗೂ ಇನ್ನೋರ್ವ ಸೇರಿ, ಹೊಲದಲ್ಲಿ ಕುಳಿತು ಓದುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಂತರ ಬಾಲಕಿಗೆ ಅವರೇ ವಿಷ ಕುಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾಗಿ ಹೇಳಲಾಗಿದ್ದು, ಬಾಲಕಿ ಚಿಕಿತ್ಸೆ ಫಲಿಸದೆ ಮೇ 23ರಂದು ಮೃತಪಟ್ಟಿದ್ದಾಳೆ.

    ಈ ಕುರಿತು ಬಾಲಕಿಯ ತಂದೆ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಬಸವರಾಜ ಹಾಗೂ ಇನ್ನೋರ್ವ ಸೇರಿ ತಮ್ಮ ಮಗಳನ್ನು ಅಪಹರಿಸಿ ಆಕೆಗೆ ವಿಷ ಕುಡಿಸಿದ್ದಾರೆ. ಅಸ್ವಸ್ಥಳಾದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಹೀಗಾಗಿ ಪ್ರಕರಣವನ್ನು ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ.

    ತನಿಖೆ ನಡೆಸಿ ಈಗಾಗಲೇ ಬಸವರಾಜ ಕಿರಾಳೆ ಎಂಬಾಂತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇನ್ನೋರ್ವನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಗರಗ ಠಾಣೆ ಇನ್​ಸ್ಪೆಕ್ಟರ್ ತಿಳಿಸಿದ್ದಾರೆ.

    ಬೋಗೂರ ಪ್ರಕರಣ ತೀವ್ರತೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಾದನಬಾವಿ ಬಾಲಕಿಗೆ ಆಗಿರುವ ಅನ್ಯಾಯದ ಕುರಿತು ಆಕೆಯ ತಂದೆಯೇ ಘಟನೆಯನ್ನು ಬಹಿರಂಗಪಡಿಸಿದ್ದಾರೆ.

    ಈ ಪ್ರಕರಣದಲ್ಲೂ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಕೇಳಿಬರತೊಡಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts