ಚಿಕ್ಕಮಗಳೂರು: ರಾಜ್ಯದ ಜನರ ಹಣವನ್ನು ಗ್ಯಾರಂಟಿ ಯೊಜನೆಗಳಿಗೆ ಬಳಸುತ್ತಿರುವುದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಶಾಸಕರು ತಮ್ಮ ಅವಧಿಯಲ್ಲಿ ತಂದಿರುವ ಹೊಸ ಅಭಿವೃದ್ಧಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿಜೆಪಿ ಮುಖಂಡ ಹಿರೇಮಗಳೂರು ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದ ಜನ ತೆರಿಗೆ ಕಟ್ಟಿದ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ. ಇದರಿಂದ ರಾಜ್ಯದ ಖಜಾನೆ ಬರಿದಾಗಿದೆ. ಲೋಕಸಭೆ ಚುನಾವಣೆ ನಂತರ ಈ ಬಿಟ್ಟಿ ಯೋಜನೆಗಳನ್ನು ನಿಲ್ಲಿಸುವ ಷಡ್ಯಂತರವನ್ನು ಸರ್ಕಾರ ನಡೆಸಿದೆ ಎಂದು ಆರೋಪಿಸಿದರು.
ಎಸ್ಸಿ ಎಸ್ಟಿ ಸಮುದಾಯಕ್ಕೆ ಬಳಸ ಬೇಕಾದ 10 ಸಾವಿರ ರೂ.ಕೋಟಿ ಅನುದಾನವನ್ನು ಮುಸ್ಲಿಂ ಸಮುದಾಯಕ್ಕೆ ಬಿಡುಗಡೆ ಮಾಡಿದೆ. ಎಲ್ಲ ರಾಜ್ಯಕ್ಕೆ ನೀಡಿರುವ ತೆರಿಗೆ ಪಾಲಿನ ಬಗ್ಗೆ ಕೇಂದ್ರ ಅರ್ಥ ಸಚಿವೆ ನಿರ್ಮಲಾಸೀತರಾಮನ್ ಸ್ಪಷ್ಟನೆ ನೀಡಿದ್ದರೂ ಸಹ ತಮ್ಮ ರಾಜ್ಯಕ್ಕೆ ತೆರಿಗೆ ಪಾಲು ನೀಡಿಲ್ಲ ಎಂದು ರಾಜ್ಯ ಸರ್ಕಾರ ಜನರಲ್ಲಿ ಗೊಂದಲ ಸೃಷ್ಟಿಮಾಡಿದೆ ಎಂದು ದೂರಿದರು.
ಕೇಂದ್ರದಿಂದ ಮಂಜೂರಾಗಿರುವ ಮೆಡಿಕಲ್ ಕಾಲೇಜನ್ನು ಶೀಘ್ರ ಪೂರ್ಣಗೊಳಿಸಬೇಕು.ಡಿಸಿ ಕಚೇರಿ ಸಂಕೀರ್ಣ, ಹೊಸ ಕೋಟ್ ಕಟ್ಟಡ, ಅರಣ್ಯಭವನ, ತಾಲೂಕು ಕಚೇರಿ, ಮೆಡಿಕಲ್ ಕಾಲೇಜು ಈ ಎಲ್ಲ ಕಾಮಗಾರಿಗಳು ಹಿಂದಿನ ಶಾಸಕ ಸಿ.ಟಿ.ರವಿ ಅವರ ಅಧಿಕಾರ ಅವಧಿಯಲ್ಲಿ ಮಂಜೂರಾಗಿವೆ. ಹಾಲಿ ಶಾಸಕರು 9 ತಿಂಗಳ ಅವಧಿಯಲ್ಲಿ ಯಾವ ಕಾಮಗಾರಿ ಹಾಗೂ ಅನುದಾನ ತಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.