ಗ್ವಾಲಿಯರ್: ಲವ್ವರ್ ರಕ್ಷಿಸಲು ಅಪ್ರಾಪ್ತೆಯೊಬ್ಬಳು ಪೊಲೀಸ್ ಠಾಣೆಯಲ್ಲೇ ತಂದೆಯೊಂದಿಗೆ ವಾಗ್ವಾದಕ್ಕಿಳಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಬುಧವಾರ ನಡೆದಿದೆ. ಲವ್ವರ್ ವಿರುದ್ಧ ದೂರು ನೀಡದಂತೆ ತಂದೆಗೆ ಮನವೊಲಿಸುವಾಗ ಒಪ್ಪದಿದ್ದಕ್ಕೆ ಠಾಣೆಯ ಬಾತ್ರೂಮ್ಗೆ ತೆರಳಿ ಹುಡುಗಿ ವಿಷ ಸೇವಿಸಿದ ಪ್ರಸಂಗವೂ ಜರುಗಿದೆ.
ವಿಷ ಸೇವಿಸಿ ಹೊರಬಂದ ಹುಡುಗಿ ಈಗ ದೂರು ಸಲ್ಲಿಸು ನಾನು ವಿಷ ಸೇವಿಸಿದ್ದೇನೆಂದು ತಂದೆಗೆ ಹೇಳಿದ್ದಾಳೆ. ತಂದೆ-ಮಗಳನ್ನು ಮನವೊಲಿಸಲು ಸಹ ಪೊಲೀಸರು ಪ್ರಯತ್ನಪಟ್ಟಿದ್ದು, ಇತ್ತ ಅಸ್ವಸ್ತಗೊಂಡಿದ್ದ ಹುಡುಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆ ಅಪಾಯದಿಂದ ಪಾರಾಗಿದ್ದಾಳೆ. ಅಂದಹಾಗೆ ಈ ಎಲ್ಲ ಪ್ರಸಂಗ ಬುಧವಾರ ಬೆಳಗ್ಗೆ ನಡೆದಿದೆ.
ಇದನ್ನೂ ಓದಿ: ರೋಹಿಣಿ ಸಿಂಧೂರಿ ಪರ ಸಮರ್ಥನೆಗೆ ಸರ್ಕಾರ ಹಿಡಿದ ದಾರಿ ಯಾವುದು?
ಘಟನೆಯ ವಿವರಣೆಗೆ ಬರುವುದಾದರೆ ಗ್ವಾಲಿಯರ್ನ ಮೊತಿಜ್ಹೀಲ್ ಕಂಟೋನ್ಮೆಂಟ್ ನಿವಾಸಿಯಾಗಿರುವ 17 ವರ್ಷದ ಹುಡುಗಿ, ರಿಂಕು ಜತಾವ್(19) ಎಂಬಾತನನ್ನು ಪ್ರೀತಿಸುತ್ತಿದ್ದಾಳೆ. ಇಬ್ಬರು ಸಹ ಒಂದೇ ಏರಿಯಾದ ನಿವಾಸಿಗಳು. ಈ ಬಗ್ಗೆ ಹುಡುಗಿ ಕುಟುಂಬಕ್ಕೆ ತಿಳಿದಾಗ ಇದೆಲ್ಲ ಮುಂದುವರಿದರೆ ಸರಿಯಿಲ್ಲ ಎಂದು ಗದರಿದ್ದರು. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪ್ರೇಮಿಗಳು ಪ್ರೀತಿಯನ್ನು ಮುಂದುವರಿಸಿದ್ದರು. ಹೀಗಿರುವಾಗ ಡಿ. 13ರಂದು ಹುಡುಗಿ ಬಹೊದಾಪುರ್ ಏರಿಯಾದಲ್ಲಿರುವ ಮದುವೆ ಸಮಾರಂಭವೊಂದಕ್ಕೆ ಆಗಮಿಸಿದ್ದಳು. ಅಲ್ಲಿ ಆಕೆ ರಿಂಕು ಜತೆ ಪರಾರಿಯಾಗಿದ್ದಳು. ಹುಡುಗಿ ಅಪ್ರಾಪ್ತೆಯಾಗಿದ್ದರಿಂದ ಆಕೆಯ ಕುಟುಂಬ ರಿಂಕು ಅಪಹರಿಸಿದ್ದಾನೆಂದು ದೂರು ನೀಡಿದ್ದರು.
ಇಬ್ಬರು ಮೊದಲು ಆಗ್ರಾಗೆ ತೆರಳಿದ ಬಳಿಕ ದೆಹಲಿಯಲ್ಲಿ ನೆಲೆಸಿದ್ದರು. ಇದರ ನಡುವೆ ಇಬ್ಬರ ಬಳಿಯಿದ್ದ ಹಣ ಖಾಲಿಯಾದಾಗ ಇಬ್ಬರು ಹಿಂತಿರುಗಿ ಮಂಗಳವಾರ ರಾತ್ರಿ 1 ಗಂಟೆ ಸುಮಾರಿಗೆ ಹಳೆಯ ಕಂಟೋನ್ಮೆಂಟ್ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ, ಪ್ರಕರಣ ಬಹೊದಾಪುರ್ ಠಾಣೆಯಲ್ಲಿ ದಾಖಲಾಗಿದ್ದರಿಂದ ಅವರಿಬ್ಬರನ್ನು ಅಲ್ಲಿಗೆ ಕಳುಹಿಸಲಾಯಿತು. ಇತ್ತ ಪೊಲೀಸರು ಹುಡುಗಿಯ ಕುಟುಂಬವನ್ನು ಠಾಣೆಗೆ ಕರೆಯಿಸಿದರು. ಬೆಳಗಿನ ಜಾವ 5 ಗಂಟೆಗೆ ಠಾಣೆಗೆ ಬಂದ ಕುಟುಂಬ ರಿಂಕು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಮಗಳನ್ನು ಕೇಳಿದ. ಆದರೆ, ಆಕೆ ಒಪ್ಪದಿದ್ದಾಗ ಮಾತಿನ ಚಕಮಕಿ ಶುರುವಾಯಿತು. ಈ ವೇಳೆ ಬಾತ್ರೂಮ್ಗೆ ಹೋಗಬೇಕೆಂದು ಹೇಳಿ ಹೋದ ಹುಡುಗಿ ವಿಷವನ್ನು ಸೇವಿಸಿದ್ದಾಳೆ.
ಇದಾದ ಕೆಲ ಸಮಯದ ಬಳಿಕ ಮತ್ತೆ ಬಂದು ಹುಡುಗಿ ನೀನು ದೂರು ಸಲ್ಲಿಸು ನಾನು ವಿಷ ಕುಡಿದಿದ್ದೇನೆಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ತಕ್ಷಣ ಆಕೆಯನ್ನು ತಡೆದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸದ್ಯ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಹುಡುಗಿ ಗುಣಮುಖಳಾದ ಬಳಿಕ ಆಕೆ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)
ಸಣ್ಣ ಪಕ್ಷಗಳನ್ನು ನಿರ್ವಹಿಸಲಾಗದೆ ವಾಜಪೇಯಿ ಸರ್ಕಾರ ಪತನ – ಮಾಜಿ ಅಧಿಕಾರಿ ಶಕ್ತಿ ಸಿನ್ಹಾರ ಪುಸ್ತಕದಲ್ಲಿ ವಿಶ್ಲೇಷಣೆ