ಕೊಪ್ಪಳ: ಶ್ರೀಮಂತರಿಗೆ ಗ್ಯಾರಂಟಿ ಯೋಜನೆ ಸಹಿಸಲಾಗುತ್ತಿಲ್ಲ. ನಾವು ಅವರಿಗಾಗಿ ಯೋಜನೆ ಜಾರಿ ಮಾಡಿಲ್ಲ. ಬಡವರಿಗಾಗಿ ಮಾಡಿದ್ದೇವೆ. ಹೊಟ್ಟೆ ತುಂಬಿದವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇನ್ಫೋಸಿಸ್ ನಾರಾಯಣ ಮೂರ್ತಿ ಗ್ಯಾರಂಟಿ ಯೋಜನೆಗಳನ್ನು ಉಚಿತವಾಗಿ ನೀಡಬಾರದಿತ್ತೆಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಡವರಿಗೆ ಗ್ಯಾರಂಟಿ ಯೋಜನೆಗಳು ಅನುಕೂಲವಾಗಿವೆ. ಶ್ರಮಿಕರು, ದುಡಿದು ತಿನ್ನುವ ಬಡವರು ಯೋಜನೆಗಳನ್ನು ನೆನೆಸುತ್ತಿದ್ದಾರೆ. ಸರ್ಕಾರ ಅವರಿಗಾಗಿ ಯೋಜನೆ ಜಾರಿ ಮಾಡಿದೆ. ಶ್ರೀಮಂತರು ಹೊಟ್ಟೆ ತುಂಬಿದವರಿಗಾಗಿ ಅಲ್ಲವೆಂದು ಪರೋಕ್ಷವಾಗಿ ತಿರುಗೇಟು ನೀಡಿದರು.
ತೆಲಂಗಾಣದಲ್ಲಿ ಆರು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ನಾಲ್ಕು ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ತೆಲಂಗಾಣದಲ್ಲಿ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬಗ್ಗೆ ಮಾತನಾಡಲು ಈಶ್ವರಪ್ಪಗೆ ಅರ್ಹತೆ ಇಲ್ಲ. ಅವರಿಗೆ ಶಿವಮೊಗ್ಗದಲ್ಲಿ ಟಿಕೆಟ್ ಇಲ್ಲ. ನೆಲೆಯೂ ಇಲ್ಲ. ಅಂಥವರು ರಾಜ್ಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದು ಕುಟುಕಿದರು.