ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ (ಎನ್ಆರ್ಸಿ)ಯನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಇಂದು ಗೃಹ ಸಚಿವಾಲಯ ಲೋಕಸಭೆಯಲ್ಲಿ ಲಿಖಿತವಾಗಿ ಪ್ರತಿಕ್ರಿಯೆ ನೀಡಿದೆ.
ದೇಶದೆಲ್ಲೆಡೆ ಎನ್ಆರ್ಸಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆಯಾ ಎಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಬರವಣಿಗೆಯ ಮೂಲಕ ಉತ್ತರಿಸಿದ ಕೇಂದ್ರ ಗೃಹಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ, ಈ ಕ್ಷಣದವರೆಗೆ ಸರ್ಕಾರ ಆ ಬಗ್ಗೆ ನಿರ್ಧಾರ ಮಾಡಿಲ್ಲ ಎಂದಿದ್ದಾರೆ.
ಸೋಮವಾರದಿಂದ ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಅಧಿವೇಶನದಲ್ಲಿ ರಾಜ್ಯ ಹಾಗೂ ಲೋಕಸಭೆ ಎರಡರಲ್ಲೂ ಪ್ರತಿಪಕ್ಷಗಳು ಹೆಚ್ಚಾಗಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಎನ್ಆರ್ಸಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್) ಬಗ್ಗೆಯೇ ಹೆಚ್ಚಾಗಿ ಚರ್ಚೆ ನಡೆಸಿದ್ದಾರೆ. ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿಗಳು ಮುನ್ನೆಲೆಗೆ ಬಂದಾಗಿನಿಂದಲೂ ರಾಷ್ಟ್ರದ ಬಹುತೇಕ ಜನರು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ.
ಎನ್ಪಿಆರ್ನ್ನು ಹಿಂದೆಯೂ ಮಾಡಲಾಗಿತ್ತು. ಆದರೆ ಆಗ ಅದರಲ್ಲಿದ್ದ ಪ್ರಶ್ನೆಗಳು ತೀರ ಸರಳವಾಗಿದ್ದವು. ಆದರೆ ಈಗಿನ ಕೇಂದ್ರ ಸರ್ಕಾರದ ಎನ್ಪಿಆರ್ನಲ್ಲಿ ತಂದೆಯ ಹುಟ್ಟಿದ ದಿನಾಂಕದಂತಹ ಕ್ಲಿಷ್ಟ ಪ್ರಶ್ನೆಗಳನ್ನು ಇಡಲಾಗಿದೆ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ, ಕಾಂಗ್ರೆಸ್ನ ಗುಲಾಬ್ ನಭಿ ಆಜಾದ್ ಆರೋಪಿಸಿದರು.
ಸಿಎಎ, ಎನ್ಪಿಆರ್, ಎನ್ಆರ್ಸಿ ವಿಚಾರಗಳನ್ನು ಮುಂದಿಟ್ಟುಕೊಂಡು ತನ್ನೆಲ್ಲ ವಿಫಲತೆಗಳನ್ನೂ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಅದಾದ ಬಳಿಕ ಎನ್ಆರ್ಸಿ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಗೃಹ ಸಚಿವ ಅಮಿತ್ ಷಾ ಅವರು ಬಿಲ್ ಮಂಡನೆ ಮಾಡುವಾಗಲೇ ಹೇಳಿದ್ದರು.
ಸಿಎಎ ಕಾಯ್ದೆಯಾದಾಗಿನಿಂದಲೂ ದೇಶದ ವಿವಿಧ ಯೂನಿವರ್ಸಿಟಿಗಳು ಸೇರಿ ಹಲವು ಕಡೆ ವಿರೋಧಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. (ಏಜೆನ್ಸೀಸ್)