ಬೆಂಗಳೂರು: ಕರೊನಾ ನಿರ್ವಹಣೆ ಉಸ್ತುವಾರಿ ಸಚಿವ ಯಾರೆಂಬ ವಿಚಾರದಲ್ಲಿ ಸಾಕಷ್ಟು ವ್ಯತ್ಯಾಸಗಳು ಆರಂಭದಿಂದಲೂ ನಡೆದೇ ಇದೆ. ಇದೀಗ ಕಂದಾಯ ಸಚಿವ ಆರ್.ಅಶೋಕ್ ವಿಚಾರದಲ್ಲೂ ಗೊಂದಲ ಮೂಡಿದೆ. 100 ದಿನದಲ್ಲಿ ನಾಲ್ಕು ಮಂದಿಗೆ ಜವಾಬ್ದಾರಿ ಕೊಟ್ಟ ಕ್ರಮವೂ ಚರ್ಚೆಗೆ ಗ್ರಾಸವಾಗಿದೆ.
ಆರೋಗ್ಯ ಸಚಿವರನ್ನು ಟಾಸ್ಕ್ ಫೋರ್ಸ್ಗೆ ಸೀಮಿತಗೊಳಿಸಿ ಸ್ವತಃ ವೈದ್ಯರಾದ ವೈದ್ಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಕರೊನಾ ಮುಖ್ಯ ವ್ಯವಸ್ಥೆ ನಿರ್ವಹಿಸಲು ಜವಾಬ್ದಾರಿ ನೀಡಲಾಗಿತ್ತು. ಬಳಿಕ ಕರೊನಾ ನಿತ್ಯ ಸುದ್ದಿಗೋಷ್ಠಿ ಜವಾಬ್ದಾರಿಯನ್ನು ಶಿಕ್ಷಣ ಸಚಿವರಿಗೆ ನೀಡಲಾಗಿತ್ತು. ಇದೀಗ ಸುಧಾಕರ್ ಅವರು ಕ್ವಾರಂಟೈನ್ನಲ್ಲಿ ಇರುವ ಕಾರಣ ಬೆಂಗಳೂರು ಕರೊನಾ ನಿರ್ವಹಣೆ ಜವಾಬ್ದಾರಿಯನ್ನು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ವಹಿಸಲಾಗಿದೆ. ಜವಾಬ್ದಾರಿ ಕೊಟ್ಟ ಖುಷಿಯನ್ನು ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದರು. ಇದು ಸರ್ಕಾರದೊಳಗೆ ಸಚಿವರ ನಡುವೆ ಆಂತರಿಕ ಅಸಮಾಧಾನಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಕರೊನಿಲ್ ತಡೆಗೆ ಆಯುಷ್ ಇಲಾಖೆ ತಜ್ಞರ ಸಮಿತಿಯಲ್ಲಿರುವ ಮುಸ್ಲಿಮರು ಕಾರಣ? ಇಲ್ಲಿದೆ ನೋಡಿ ವಾಸ್ತವ !
ಡಿಸಿಎಂ ಹಾಗೂ ವೈದ್ಯ ಡಾ.ಅಶ್ವತ್ಥನಾರಾಯಣ ಅವರಿಗೆ ಏಕೆ ಕೊಡಲಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ. ಜತೆಗೆ ಭಾನುವಾರ ಡಾ.ಸುಧಾಕರ್ ಮಾಡಿದ ಟ್ವೀಟ್ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾನುವಾರದ ಥಾಟ್ ಎಂಬ ಶೀರ್ಷಿಕೆಯಡಿ, ನಾಯಕತ್ವವು ಸ್ಥಾನದಲ್ಲಿಲ್ಲ ಆದರೆ ಕಾರ್ಯದಲ್ಲಿದೆ ಎಂದು ನಾನು ನಂಬುತ್ತೇನೆ ಎಂದು ಕೊನೆಗೊಳ್ಳುವ ಸಂದೇಶ ಪ್ರಕಟಿಸಿದ್ದಾರೆ. ಇದು ಅಶೋಕ್ ಅವರಿಗೆ ಚಿವುಟಿದ್ದೆಂದು ಹೇಳಲಾಗುತ್ತಿದೆ.