ಬೆಳಗಾವಿ: ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ತಮಿಳುನಾಡಿನಿಂದ ಬೆದರಿಕೆ ಕರೆ ಬಂದ ಬೆನ್ನಲ್ಲೇ ಇಟಲಿಯಿಂದ ವ್ಯಕ್ತಿಯೋರ್ವ ಕರೆ ಮಾಡಿ ಹಿಂದುತ್ವದ ಬಗ್ಗೆ ಮಾತನಾಡಿದ್ದಲ್ಲೆ, ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಬಗ್ಗೆ ಈಶ್ವರಪ್ಪನವರು ಪ್ರತಿಕ್ರಿಯೆ ನೀಡಿದ್ದು, ಎಂತಹ ಬೆದರಿಕೆ ಬಂದರೂ ನಾನು ಉತ್ತರ ನೀಡುವುದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇಟಲಿಯಿಂದ ಬರಲಿ, ಎಲ್ಲಿಂದಲೇ ಬರಲಿ ನಾನು ಯೋಚಿಸುವುದಿಲ್ಲ ಎಂದಿದ್ದಾರೆ.
ಕೆಲವು ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿರುವುದು ಅನ್ಯಾಯ. ನನ್ನ ಕೇಳಿಕೊಂಡು ಪಿಎಗೆ ಕರೆ ಮಾಡಿದ್ದಾರೆ. ಬೆದರಿಕೆಗೆಲ್ಲ ನಾನು ಹೆದರುವುದೂ ಇಲ್ಲ. ಈಗಾಗಲೇ ದೂರು ನೀಡಿದ್ದೇನೆ. ಹಿಂದೆಯೂ ಒಂದು ಬಾರಿ ಹೀಗೆ ಆಗಿತ್ತು. ಶಿವಮೊಗ್ಗ ಎಸ್ಪಿ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿಗೆ ತಿಳಿಸಿದ್ದೇನೆ. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಸ್ಥಳಾಂತರ
ಗ್ರಾಮೀಣಾಭಿವೃದ್ಧಿ ಇಲಾಖೆ ಕಚೇರಿಯನ್ನು ಶೀಘ್ರವೇ ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರ ಮಾಡುವುದಾಗಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಅನುಕೂಲಕ್ಕಾಗಿ ನಮ್ಮ ಇಲಾಖೆಯನ್ನು ಇಲ್ಲಿಗೆ ತರಲು ನಿರ್ಧರಿಸಿದ್ದೇವೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಗಡಿ, ಭಾಷೆ ವಿಚಾರದಲ್ಲಿ ರಾಜಿಯಿಲ್ಲ
ಮಹಾರಾಷ್ಟ್ರದಲ್ಲಿ ಎಂಇಎಸ್, ಎನ್ಸಿಪಿ, ಶಿವಸೇನೆಗಳು ಗಡಿ ವಿಚಾರದ ಬಗ್ಗೆ ಕ್ಯಾತೆ ತೆಗೆಯುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕೆಲವರಿಗೆ ಗಡಿ, ಜಲ, ಭಾಷೆ ವಿಚಾರ ಪೌರುಷತ್ವ ವಿಷಯವಾಗಿದೆ. ಚೀಪ್ ಪಬ್ಲಿಸಿಟಿಗಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ. ನಮ್ಮ ಅನ್ನ ತಿಂದು ನಮಗೇ ದ್ರೋಹ ಮಾಡುವಂತಹ ಹುನ್ನಾರವನ್ನು ಈ ದೇಶ, ರಾಜ್ಯದ ಗಡಿ ಭಾಗಗಳಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.