ಮಂಗಳೂರು: ಮೂಲ್ಕಿ ಸಮೀಪ ಸ್ಕೂಟರ್ ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದ ಮೂಲ್ಕಿ ಸ್ಟೇಷನ್ನ ಗೃಹರಕ್ಷಕ ಸಿಬ್ಬಂದಿ ರೇಣುಕಾ ಅವರನ್ನು ತಕ್ಷಣವೇ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾನವೀಯತೆ ಮೆರೆದರು.
ಬುಧವಾರ ಮಧ್ಯಾಹ್ನ 12.20ರ ಸುಮಾರಿಗೆ ರೇಣುಕಾ ಠಾಣೆಯಿಂದ ತಮ್ಮ ಆಕ್ಟಿವಾದಲ್ಲಿ ಊಟಕ್ಕೆಂದು ಮನೆಗೆ ಹೊರಟಿದ್ದರು. ಆಗ ಅವರ ಸ್ಕೂಟರ್ ನಿಯಂತ್ರಣಕ್ಕೆ ಸಿಗದೆ ವಿಜಯ ಸನ್ನಿಧಿ ಜಂಕ್ಷನ್ ಬಳಿ ರಸ್ತೆ ಬದಿ ನಿಂತಿದ್ದ ಟಾಟಾ ಏಸ್ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಯಿತು.
ಆಗ ಅಲ್ಲಿ ಸಾಗುತ್ತಿದ್ದ ಸಚಿವ ಕೋಟ ಘಟನೆ ನೋಡಿದ ಕ್ಷಣವೇ ನಿಲ್ಲಿಸಿದರು, ಗಾಯಗೊಂಡ ರೇಣುಕಾರನ್ನು ತಮ್ಮ ಇನ್ನೋವಾ ವಾಹನದಲ್ಲೇ ಮೂಲ್ಕಿಯ ಸಂತ ಆನ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ರೇಣುಕಾ ಅವರು ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.