ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಶನಿವಾರ ಮುಂಜಾನೆಯೇ ಎಪಿಎಂಸಿಗೆ ಭೇಟಿ ನೀಡಿ ರೈತರು ಹಾಗೂ ವರ್ತಕರ ಅಹವಾಲು ಆಲಿಸಿದರು. ಇದೇ ವೇಳೆ ಕರೋನಾ ಸೋಂಕು ನಿವಾರಕ ಟನಲ್ ನಲ್ಲೆ ಸ್ವತಃ ಸಚಿವರೇ ಆಗಮಿಸಿ ಉದ್ಘಾಟನೆ ಮಾಡುವ ಮೂಲಕ ಎಲ್ಲರೂ ಕಡ್ಡಾಯವಾಗಿ ನಿಯಮ ಪಾಲಿಸಬೇಕು ಎಂಬ ಸಂದೇಶ ಸಾರಿದರು.
ಈ ರೀತಿ ಸಂದೇಶ ಸಾರಿದವರೇ ಅದನ್ನು ಕಡ್ಡಾಯವಾಗಿ ಪಾಲನೆ ಮಾಡದಿದ್ದರೆ ಉಳಿದವರು ಹೇಗೆ ಅನುಸರಿಸಿಯಾರು? ಕರೊನಾ ಸೋಂಕು ಹರಡದಂತೆ ತಡೆಯುವುದಕ್ಕಾಗಿ ಎಲ್ಲರೂ ಮಾಸ್ಕ್ ಧರಿಸಬೇಕು, ಸೋಷಿಯಲ್ ಡಿಸ್ಟೆನ್ಸ್ ಕಾಪಾಡಬೇಕು ಎಂಬಿತ್ಯಾದಿ ನಿಯಮಗಳನ್ನು ಹೊಣೆಗಾರಿಕೆಯುಳ್ಳವರೇ ಗಾಳಿಗೆ ತೂರಿರುವುದು ಕಂಡುಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಿಣಿಗೆ ಹೇಳುವಂತೆ ಪ್ರತಿ ಭಾಷಣದಲ್ಲೂ ಸೋಷಿಯಲ್ ಡಿಸ್ಟೆನ್ಸಿಂಗ್ನ ಮಹತ್ವವನ್ನು ಸಾರುತ್ತ ಬಂದಿದ್ದಾರೆ. ಆದರೆ, ಅವರ ಮಾತುಗಳನ್ನು ಚಾಚೂ ತಪ್ಪದೆ ಆಲಿಸುವ ಹೊಣೆಗಾರಿಕೆಯುಳ್ಳ ಜನಪ್ರತಿನಿಧಿಗಳಾದ ಸಂಸದ ಪ್ರತಾಪ ಸಿಂಹ, ಶಾಸಕ ನಾಗೇಂದ್ರ ಕೂಡ ಸೋಷಿಯಲ್ ಡಿಸ್ಟೆನ್ಸಿಂಗ್ ಮಹತ್ವವನ್ನು ಮರೆತದ್ದು ವಿಪರ್ಯಾಸ.
ಇಷ್ಟೂ ಸಾಲದು ಎಂಬಂತೆ, ನಿಯಮ ಪಾಲನೆ ಸರಿಯಾಗಿರುವುದನ್ನು ಖಾತರಿಗೊಳಿಸಬೇಕಾದ ಹೊಣೆಗಾರಿಕೆಯ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಡಿಸಿಪಿ ಪ್ರಕಾಶ್ ಗೌಡ ಮತ್ತು ಇತರರು ಕೂಡ ಸೋಷಿಯಲ್ ಡಿಸ್ಟೆನ್ಸಿಂಗ್ ವಿಚಾರವನ್ನು ಕಡೆಗಣಿಸಿದ್ದು ದುರಾದೃಷ್ಟವೇ ಸರಿ.
ಶೀಘ್ರ ಕೋಲ್ಡ್ ಸ್ಟೋರೇಜ್: ಎಲ್ಲ ಎಪಿಎಂಸಿ ಗೆ ಭೇಟಿ ನೀಡಿದಂತೆ ಇಲ್ಲೂ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಸಮಸ್ಯೆಗಳ ಪರಿಹಾರವೇ ನನ್ನ ಮೊದಲ ಆದ್ಯತೆ. ಪೊಲೀಸರಿಂದ ಸೇರಿ ಯಾರಿಂದಲೂ ಸಮಸ್ಯೆ ಆಗಬಾರದು ಎಂಬುದು ಮುಖ್ಯಮಂತ್ರಿಗಳ ಉದ್ದೇಶ ಸಹ. ಹೀಗಾಗಿ ಖುದ್ದು ನಾನೇ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದೇನೆ ಎಂದು ಮಾನ್ಯ ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಎಪಿಎಂಸಿಗೆ ಕೋಲ್ಡ್ ಸ್ಟೋರೇಜ್ ಸಿಸ್ಟಮ್ ಅಳವಡಿಸಬೇಕಿದೆ. ಆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ. ಕೋಲ್ಡ್ ಸ್ಟೋರೆಜ್ ಇದ್ದರೆ ತರಕಾರಿ ಇಟ್ಟು ಮಾರಲು ರೈತರಿಗೆ ಅನುಕೂಲ ಆಗಲಿದೆ. ಇದರಿಂದ ತರಕಾರಿ ಕೊಳೆಯುವಿಕೆಗೆ ಬ್ರೇಕ್ ಬೀಳಲಿದೆ ಎಂದು ಸಚಿವರು ತಿಳಿಸಿದರು.
ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ತರಕಾರಿ ನಾಶಪಡಿಸುತ್ತಿರುವ ವಿಚಾರ ಅದನ್ನು ಸರ್ಕಾರದಿಂದಲೇ ಖರೀದಿ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ. ಕೆಲವೆಡೆ ಈಗಾಗಲೇ ಆ ಕೆಲಸ ಆಗುತ್ತಿದೆ. ರೈತರಿಂದ ಪಡೆದು ಹಾಪ್ ಕಾಮ್ಸ್ ಮೂಲಕ ಮಾರಾಟದ ಬಗ್ಗೆ ಚಿಂತನೆ ಇದೆ. ಜನಪ್ರತಿನಿಧಿಗಳು ಅಧಿಕಾರಿಗಳ ಬಳಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವರು ತಿಳಿಸಿದರು.
ಕ್ವಾರಂಟೈನ್ ನಿಯಮಕ್ಕೆ ತಲೆಬಾಗಿ- ತಪ್ಪಿದ್ರೆ ಮನೆಯೊಳಗೇ ಬಂಧಿಯಾಗಬೇಕಾಗುತ್ತದೆ ಜೋಕೆ!
ನೀರು ಕುಡಿಯುವ ಬದಲು ಫಾರ್ಮಾಲಿನ್ ಮಿಶ್ರಿತ ನೀರು ಕುಡಿದ ಜಿಲ್ಲಾ ಆರೋಗ್ಯಾಧಿಕಾರಿ!