ಸೂರತ್: ದೇಶ ಮಾರ್ಚ್ 24ರ ರಾತ್ರಿ ಲಾಕ್ಡೌನ್ ಆದಾಗಿನಿಂದಲೂ ವಲಸೆ ಕಾರ್ಮಿಕರು, ದಿನಗೂಲಿ ನೌಕರರ ಪಾಡು ಹೇಳತೀರದ್ದಾಗಿದೆ.
ತಾವು ಕೆಲಸ ಮಾಡುತ್ತಿದ್ದ ಸ್ಥಳದಿಂದ ಸ್ವಂತ ಊರಿಗೆ ತೆರಳು ಅನೇಕರು ಪರದಾಡಿದ್ದಾರೆ. ವಾಹನಗಳು ಸಿಗದೆ ನಡೆದುಕೊಂಡು ಹೋದವರು ಅದೆಷ್ಟೋ ಮಂದಿ. ನಡೆದು, ನಡೆದು ದಾರಿ ಮಧ್ಯೆ ಜೀವವನ್ನೇ ಬಿಟ್ಟವರೂ ಹಲವರು.
ಇನ್ನೇನು ಕೆಲವೇ ದಿನಗಳಲ್ಲಿ ಲಾಕ್ಡೌನ್ ಅವಧಿ ಮುಗಿಯಲಿದೆ. ಅದು ಮುಂದೂಡುವ ಸಾಧ್ಯತೆ ಹೆಚ್ಚಾಗಿದ್ದರೂ ಅಧಿಕೃತ ಘೋಷಣೆ ಆಗಿಲ್ಲ.
ಹೀಗಿರುವಾಗ ಗುಜರಾತ್ನ ಸೂರತ್ನಲ್ಲಿ ಸಿಲುಕಿರುವ ನೂರಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಾಳ್ಮೆ ಕಳೆದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಲಾಕ್ಡೌನ್ನಿಂದ ಸಂಕಷ್ಟಕ್ಕೆ ಈಡಾಗಿರುವ ಅವರು ಮತ್ತೆ ಅವಧಿ ಮುಂದೂಡುವ ಬಗ್ಗೆ ವರದಿಯಾಗುತ್ತಿದ್ದಂತೆ ಶುಕ್ರವಾರ ರಾತ್ರಿ ಏಕಾಏಕಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ರಸ್ತೆಗಳ ಮೇಲೆ ಗುಂಪುಗೂಡಿದ್ದಲ್ಲದೆ, ಕಲ್ಲು ತೂರಾಟ ನಡೆಸಿದ್ದಾರೆ. ಹಲವು ವಾಹನಗಳಿಗೆ ಬೆಂಕಿಯನ್ನೂ ಇಟ್ಟಿದ್ದಾರೆ ಎಂದು ಸೂರತ್ ಡಿಸಿಪಿ ರಾಕೇಶ್ ಬಾರೋತ್ ತಿಳಿಸಿದ್ದಾರೆ. ಸುಮಾರು 60-70 ವಲಸೆ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಮಿಕರು ತಮಗೆ ಮನೆಗೆ ಹೋಗಬೇಕು. ಕಳಿಸಿಕೊಡಿ, ನಮ್ಮನ್ನು ಊರಿಗೆ ಹೋಗಲು ಬಿಡಿ ಎಂದು ಒತ್ತಾಯ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡು, ಸದ್ಯ ಸೂರತ್ನಲ್ಲಿ ಸಿಲುಕಿರುವ ಇವರೆಲ್ಲ ತಮ್ಮ ಸ್ವಂತ ಊರಿಗೆ ತೆರಳಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಅದರ ಮಧ್ಯೆ ಲಾಕ್ಡೌನ್ ಅವಧಿ ವಿಸ್ತರಣೆಯಾಗುವ ಸುದ್ದಿ ಹರಡುತ್ತಿದ್ದು ಮತ್ತಷ್ಟು ಹತಾಶರಾಗಿ ಹೀಗೆ ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಗುಜರಾತ್ನಲ್ಲಿ 378 ಮಂದಿ ಕರೊನಾ ಸೋಂಕಿತರಿದ್ದು, ದಿನೇದಿನೆ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಲಾಕ್ಡೌನ್ ನಿಯಮಗಳನ್ನು ಅಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಈ ಮಧ್ಯೆ ವಲಸೆ ಕಾರ್ಮಿಕರು ತೀರ ಸಂಕಷ್ಟಕ್ಕೀಡಾಗಿದ್ದಾರೆ. (ಏಜೆನ್ಸೀಸ್)