ಬೆಳಗಾವಿ: ಊರು ಸೇರಲು ಹೊರಟಿರುವ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಕುಟುಂಬವೊಂದು ಬೆಳಗಾವಿಯಲ್ಲಿ ತೀವ್ರ ಸಂಕಷ್ಟಕ್ಕೀಡಾಗಿದೆ. ಮಾಡಲು ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಹೆತ್ತ ಕೂಸಿಗೆ ಹಾಲು ಕುಡಿಸಲು ಕೂಡ ಆಗದೆ ಕುಟುಂಬ ಹೈರಾಣಾಗಿದೆ.
ಉತ್ತರಪ್ರದೇಶದ ಹುಸೇನ್ಗಂಜ್ ನಿವಾಸಿ ಮಹ್ಮದ ಅನ್ಸಾರ್ ಕುಟುಂಬ ಕೆಲಸ ಹುಡುಕಿಕೊಂಡು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿಗೆ ಆಗಮಿಸಿತ್ತು. ಅಲ್ಲಿನ ಸಿಮೆಂಟ್ ಇಟ್ಟಿಗೆ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬ ಲಾಕ್ಡೌನ್ ಆದಾಗಿನಿಂದ ಕೆಲಸ ಇಲ್ಲದೆ ಸಂಕಷ್ಟ ಎದುರಿಸುತ್ತಿದೆ.
ಇಟ್ಟಿಗೆ ಮಾಲೀಕ ಅನ್ಸಾರಿ ಕುಟುಂಬಕ್ಕೆ ಊರಿಗೆ ತೆರಳುವಂತೆ ತಿಳಿಸಿ ಒಂದು ಸಾವಿರ ರೂ. ಕೊಟ್ಟು ಕಳುಹಿಸಿದ್ದಾನೆ. ಆದರೆ, ವಾಹನ ಹಾಗೂ ರೈಲ್ವೆ ಸಂಚಾರ ಸ್ಥಗಿತಗೊಂಡಿದ್ದರಿಂದ ಊರಿಗೆ ಮರಳು ಆಗಿಲ್ಲ. ಮಾಲೀಕ ಕೊಟ್ಟಿದ್ದ ಹಣವೂ ಖರ್ಚಾಗಿ ಹೋಗಿದೆ.
ಹಣ ಖಾಲಿಯಾದ ನಂತರ ಒಂದು ವರ್ಷದ ಮಗು ಸೇರಿ ಮೂವರು ಮಕ್ಕಳು, ಪತ್ನಿಯನ್ನು ಕರೆದುಕೊಂಡು ನಾಲ್ಕೈದು ದಿನಗಳ ಹಿಂದೆ ಬೆಳಗಾವಿಗೆ ಬಂದಿರುವ ಮಹ್ಮದ್, ಮಗುವಿಗೆ ಹಾಲು ತಂದು ಕೊಡಲು ಕೂಡ ಶಕ್ತಿ ಇಲ್ಲದೆ ನರಳುತ್ತಿದ್ದಾರೆ. ಯಾರಾದರೂ ದುಡ್ಡು ಕೊಟ್ಟರೆ ಮಾತ್ರ ಮಗುವಿಗೆ ಹಾಲು. ಇಲ್ಲವಾದರೆ ಉಪವಾಸ ಇರಬೇಕಾದ ಅನಿವಾರ್ಯತೆ ಇದೆ.