ನವದೆಹಲಿ: ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುತ್ತಿರುವ ವಿಶೇಷ ವಿಮಾನಗಳಲ್ಲಿ ಮಧ್ಯದ ಸೀಟನ್ನು ಖಾಲಿ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಏರ್ ಇಂಡಿಯಾ ಸಂಸ್ಥೆಗೆ ನಿರ್ದೇಶನ ನೀಡಿದೆ.
ಮುಂದಿನ ಹತ್ತು ದಿನಗಳವರೆಗೆ ರಿಯಾಯತಿ ನೀಡಲಾಗಿದೆ. ಆದರೆ ಜೂ. 6ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ತಿಳಿಸಲಾಗಿದೆ.
ಏರ್ ಇಂಡಿಯಾ ಸಂಸ್ಥೆಯು ಮಧ್ಯದ ಸೀಟಿನಲ್ಲೂ ಪ್ರಯಾಣಿಕರನ್ನು ಕೂರಿಸುವ ಮೂಲಕ ದೈಹಿಕ ಅಂತರ ಮತ್ತು ಸುರಕ್ಷತಾ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಏರ್ ಇಂಡಿಯಾ ಪೈಲೆಟ್ ಒಬ್ಬರು ದೂರು ನೀಡಿದ್ದರು.
ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರನ್ನೊಳಗೊಂಡ ಪೀಠ, ವಿಮಾನಯಾನ ಮಹಾನಿರ್ದೇಶನಾಲಯ ಮತ್ತು ಏರ್ ಇಂಡಿಯಾ ಸಂಸ್ಥೆಗೆ ಎಚ್ಚರಿಕೆ ನೀಡಿದೆ.
ಮಧ್ಯದ ಸೀಟು ಖಾಲಿ ಬಿಡಬೇಕೆನ್ನುವುದು ಸಾಮಾನ್ಯ ಜ್ಞಾನ. ಈ ಸಮಯದಲ್ಲಿ ಪ್ರಯಾಣಿಕರ ಆರೋಗ್ಯ ನೋಡಬೇಕೇ ಹೊರತು ಏರ್ಲೈನ್ಗಳ ಆದಾಯವನ್ನಲ್ಲ ಎಂದು ಕೋರ್ಟ್ ತಿಳಿಸಿದೆ.