ಹೈದರಾಬಾದ್: ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ, ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಜತೆಗೆ ಮದ್ಯಪಾನಕ್ಕಾಗಿ ಹಣ ಕೊಡುವಂತೆ ಕಾಟ ಕೊಡುವ ಗಂಡ. ತಮ್ಮೂರಿಗೆ ಹೋಗಲಾಗದ ಅಸಹಾಯಕತೆ. ಇದೆಲ್ಲದರಿಂದ ಬೇಸತ್ತ ವಲಸೆ ಕಾರ್ಮಿಕ ದಂಪತಿ ತಮ್ಮ 6 ತಿಂಗಳ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದ್ದರು.
ಇದಕ್ಕಾಗಿ ಮಧ್ಯವರ್ತಿಯನ್ನು ಕಂಡುಕೊಂಡ ಅವರು 22 ಸಾವಿರ ರೂ.ಗೆ ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ದುರದೃಷ್ಟವಶಾತ್ ಈ ವಿಷಯ ಪೊಲೀಸರ ಕಿವಿಗೆ ಬಿದ್ದಿತು. ತಕ್ಷಣವೇ ಸ್ಥಳಕ್ಕೆ ಬಂದ ಅವರು ಮಗು ಮಾರಾಟ ಮಾಡುತ್ತಿದ್ದ ದಂಪತಿ ಹಾಗೂ ಮಧ್ಯವರ್ತಿಯನ್ನು ಬಂಧಿಸಿ, ಮಗುವನ್ನು ರಕ್ಷಿಸಿ ಶಿಶುವಿಹಾರಕ್ಕೆ ಕಳುಹಿಸಿಕೊಟ್ಟರು.
ಇದನ್ನೂ ಓದಿ: 5 ತಿಂಗಳು ಸಂಚು ರೂಪಿಸಿದ, ಹಾವಿನಿಂದ 2 ಬಾರಿ ಕಚ್ಚಿಸಿ ಪತ್ನಿಯ ಕೊಂದ
ಉತ್ತರ ಪ್ರದೇಶ ಮೂಲದ ಮದನ್ ಕುಮಾರ್ ಸಿಂಗ್ (32), ಸರಿತಾ (30) ಹಾಗೂ ಶೇಷು ಬಂಧಿತರು. ಕೆಲವು ವರ್ಷಗಳ ಹಿಂದೆ ಕೂಲಿ ಕೆಲಸ ಹುಡುಕಿಕೊಂಡು ದಂಪತಿ ಹೈದರಾಬಾದ್ಗೆ ಬಂದಿದ್ದರು. ಕಟ್ಟಡ ನಿರ್ಮಾಣ ಕಾಮಗಾರಿ ನಡೆವ ಸ್ಥಳಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಜಗದ್ಗಿರಿಗುಟ್ಟಾದ ಬಾಟುಕಮ್ಮ ಬಂಡಾದಲ್ಲಿ ವಾಸವಾಗಿದ್ದು. ಇವರಿಗೆ ಇಬ್ಬರು ಗಂಡು ಮಕ್ಕಳು. ಮೊದಲನೆಯವನಿಗೆ 7 ವರ್ಷವಾಗಿದ್ದು, ಎರಡನೇ ಮಗು 2 ತಿಂಗಳ ಹಸುಗೂಸು.
ಬಡತನದಿಂದ ಬೇಸತ್ತಿದ್ದ ದಂಪತಿ 2ನೇ ಮಗುವನ್ನು ಶೇಷು ಎಂಬ ಮಹಿಳೆಯ ಸಹಾಯದಿಂದ ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದರು. ಇದಕ್ಕಾಗಿ ಅವರು 22 ಸಾವಿರ ಪಡೆದುಕೊಂಡಿದ್ದರು. ವೈದ್ಯಕೀಯ ಪರೀಕ್ಷೆಗಾಗಿ ಮಗುವನ್ನು ಶೇಷು ಕರೆದೊಯ್ಯುತ್ತಿದ್ದಾಗ ವಿಷಯ ತಿಳಿದ ನಾವು ತಕ್ಷಣವೇ ದಾಳಿ ಮಾಡಿ ಮಗುವನ್ನು ರಕ್ಷಿಸಿದೆವು. ಸದ್ಯ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶುವಿಹಾರಕ್ಕೆ ಸ್ಥಳಾಂತರಿಸಿದ್ದೇವೆ ಎಂದು ಬಾಲಾನಗರದ ಡಿಸಿಪಿ ಪಿ.ವಿ. ಪದ್ಮಜಾ ರೆಡ್ಡಿ ತಿಳಿಸಿದ್ದಾರೆ.
ದಂಪತಿ ಮಾತ್ರ ಬಡತನಕ್ಕೆ ಬೇಸತ್ತು ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದಾಗಿ ಹೇಳುತ್ತಿದ್ದಾರೆ. ಆದರೆ ಇದನ್ನು ಬಿಟ್ಟು ಬೇರೆ ಏನಾದರೂ ಕಾರಣಗಳಿವೆಯೇ ಎಂಬುದನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.