ರಾಯ್ಪುರ: ನಕಲಿ ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆದುಕೊಂಡಿರುವವರನ್ನು ಕೆಲಸದಿಂದ ತೆಗೆಯಬೇಕು ಎಂದು ಆಗ್ರಹಿಸಿ ಯುವಕರ ಗುಂಪೊಂದು ಬೆತ್ತಲಾಗಿ ಪ್ರತಿಭಟನೆ ನಡೆಸಿರುವ ಘಟನೆ ಛತ್ತೀಸ್ಗಢದ ರಾಯ್ಪುರದಲ್ಲಿ ನಡೆದಿದೆ.
ಛತ್ತೀಸ್ಗಢದ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಗಮನವನ್ನು ಸೆಳೆಯಲು ಯುವಕರು ಈ ರೀತಿ ಪ್ರತಿಭಟನೆ ನಡೆಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ.
ಬೆತ್ತಲಾಗಿ ಪ್ರತಿಭಟನೆ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರ ಗುಂಪೊಂದು ಬಿತ್ತಿಪತ್ರಗಳನ್ನು ಹಿಡಿದು ರಸ್ತೆಯಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿರುವುದು ಕಂಡು ಬರುತ್ತದೆ. ಈ ವೇಳೆ ವಿವಿಐಪಿಯೊಬ್ಬರ ಕಾರೊಂದು ವಿಧಾನಸಭೆ ಆವರಣವನ್ನು ಪ್ರವೇಶಿಸುತ್ತಿರುವುದನ್ನು ಗಮನಿಸಿದ ಯುವಕರು ಅದನ್ನು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ನಕಲಿ ಜಾತಿ ಪ್ರಮಾಣಪತ್ರವನ್ನು ಬಳಸಿ ಉದ್ಯೋಗ ಪಡೆದಿದ್ದಕ್ಕಾಗಿ ಛತ್ತೀಸ್ಗಢದ ಸರ್ಕಾರವು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಒಬ್ಬರನ್ನು ಸೇವೆಯಿಂದ ಅಮಾನತು ಮಾಡಿತ್ತು. ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿತ್ತು.
ಯಾವುದೇ ಕ್ರಮ ಜರುಗಿಸಿಲ್ಲ
ಈ ಸಂಬಂಧ ಪ್ರತಿಕ್ರಿಯಿಸಿರುವ ಪ್ರತಿಭಟನಾ ನಿರತರೊಬ್ಬರು ಸರ್ಕಾರಿ ನೌಕರಿ ಪಡೆಯಲು ಅಭ್ಯರ್ಥಿಗಳು ನಕಲಿ ಜಾತಿ ಪ್ರಮಾಣಪತ್ರವನ್ನು ಬಳಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ಹಾಗೂ ದೂರುಗಳನ್ನು ಸಲ್ಲಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ.
ಅರ್ಹತೆ ಇಲ್ಲದವರು ಜಾತಿ ಪ್ರಮಾಣಪತ್ರವನ್ನು ಇಟ್ಟುಕೊಂಡು ಎಲ್ಲಾ ಸಮಲತ್ತುಗಳನ್ನು ಅನುಭವಿಸುತ್ತಿದ್ದು, ಸರ್ಕಾರ ಅಂತಹ ನೌಕರರ ವಿರುದ್ಧ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿರುವುದಕ್ಕೆ ಇಂದು ನಾವು ಈ ರೀತಿ ಪ್ರತಿಭಟಿಸಲು ಕಾರಣ ಎಂದು ಆಕಾಂಕ್ಷಿಯೊಬ್ಬರು ತಿಳಿಸಿದ್ದಾರೆ.