ಅಂಕೋಲಾ: ತಾಲೂಕಿನ 6 ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ವದಂತಿಗಳು ಹರಡುತ್ತಿದ್ದು, ಇದರಿಂದ ಜನರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಇವುಗಳ ಕುರಿತು ಜಿಲ್ಲಾಡಳಿತ ಸ್ಪಷ್ಟೀಕರಣ ನೀಡ ಬೇಕು ಎಂದು ಆಗ್ರಹಿಸಿ ನೌಕಾನೆಲೆ ಭೂ ಸ್ವಾಧೀನ ಯೋಜನೆ ವಿರೋಧಿ ಹೋರಾಟ ಸಮಿತಿ ವತಿ ಯಿಂದ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಹನುಮಂತ ಬಿ. ಗೌಡ ಮಾತನಾಡಿ, ಅಂಕೋಲಾ ತಾಲೂಕಿನ 6 ಗ್ರಾಮಗಳಾದ ಮಂಜಗುಣಿ, ಹೊನ್ನೆಬೈಲ್, ಬಿಳಿಹೊಂಯ್ಗಿ, ಸಿಂಗನಮಕ್ಕಿ, ವಾಡಿಬೊಗ್ರಿ, ಬಾಸಗೋಡ ಗ್ರಾಮಗಳ 3453 ಎಕರೆ ಜಮೀನನ್ನು ರಾಷ್ಟ್ರೀಯ ಸುರಕ್ಷತೆ ಮತ್ತು ದೇಶದ ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳುವ ಕುರಿತು ಭೂ ಸ್ವಾಧೀನ ಕಾಯ್ದೆ 2013ರ ಅಡಿ ಮರ ಮೌಲ್ಯಗಳ ಕುರಿತು ಸಮೀಕ್ಷೆಗೆ ನೌಕಾನೆಲೆ ವಿಶೇಷ ಭೂಸ್ವಾಧೀನಾಧಿಕಾರಿ ಯಿಂದ ಅಂಕೋಲಾ ತಹಸೀಲ್ದಾರರಿಗೆ ಆದೇಶ ಬಂದಿದೆ. ಇದು ಜನರ ನಿದ್ದೆಗೆಡಿಸಿದೆ ಎಂದರು.
ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಡಿ. ನಾಯ್ಕ,ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ, ಖಜಾಂಚಿ ಪ್ರಕಾಶ ತಾಂಡೇಲ, ಸಂಘಟನಾ ಕಾರ್ಯದರ್ಶಿಗಳಾದ ರತ್ನಾಕರ ಗಾಂವಕರ, ಚಂದ್ರಕಾಂತ ಹರಿಕಂತ್ರ, ವಿಶ್ವನಾಥ ಜಿ. ಗೌಡ, ಉಪಾಧ್ಯಕ್ಷರಾದ ರಾಮಚಂದ್ರ ಯಾದು ತಾಂಡೇಲ, ಹಮ್ಮು ವಿ. ನಾಯ್ಕ, ಲೀಲಾವತಿ ಬಿ. ನಾಯ್ಕ, ಸಹಕಾರ್ಯದರ್ಶಿಗಳಾದ ದೇವು ಗುನಗಾ, ಶೀತಲ ಆರ್. ತಾಂಡೇಲ, ವೆಂಕಟರಮಣ ಕೆ. ನಾಯ್ಕ, ಗೌರವ ಸಲಹೆಗಾರರಾದ ವಿ.ಸಿ. ನಾಯ್ಕ, ಶ್ರೀಪಾದ ಟಿ. ನಾಯ್ಕ, ವೆಂಕಣ್ಣ ವಿ. ನಾಯ್ಕ ಇತರರಿದ್ದರು.
ನೌಕಾನೆಲೆಗೆ ಯಾವುದೇ ಜಮೀನು ಹೋಗುವ ಪ್ರಶ್ನೆ ಇಲ್ಲ. ಈಗಾಗಲೇ 2ನೇ ಹಂತದ ಕಾಮಗಾರಿ ಮುಕ್ತಾಯದಲ್ಲಿದೆ. ವಿಶೇಷ ಭೂಸ್ವಾಧೀನಾಧಿಕಾರಿಗಳಿಂದ ತಹಸೀಲ್ದಾರರಿಗೆ ಬಂದ ಆದೇಶದ ಬಗ್ಗೆ ಗ್ರಾಮ ಪಂಚಾಯಿತಿ ಚುನಾವಣೆಯ ಬಳಿಕ ಸ್ಪಷ್ಟೀಕರಣ ನೀಡುತ್ತೇನೆ.
ಡಾ. ಹರೀಶಕುಮಾರ.ಕೆ, ಜಿಲ್ಲಾಧಿಕಾರಿ