ರಾಯಚೂರು: ಮಟ್ಕಾ, ಜೂಜಾಟ ಮತ್ತು ಸಿಎಚ್ ಪೌಡರ್ ಮಾರಾಟಕ್ಕೆ ಸಂಬಂಧಿಸಿದಂತೆ ಕಾನೂನು ಬಿಗಿಗೊಳಿಸುವ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸ್ಥಳೀಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಈಗಿರುವ ಕಾನೂನಿನಿಂದಾಗಿ ಅಪರಾಧಿಗಳು ಕೇವಲ ದಂಡ ಕಟ್ಟಿ ಪಾರಾಗುತ್ತಿದ್ದು, ಕಾನೂನು ಬಿಗಿಗೊಳಿಸುವ ಮೂಲಕ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಲಾಗುವುದು. ಜತೆಗೆ ಕಿಂಗ್ಪಿನ್ಗಳ ಮಾಹಿತಿ ಪಡೆದು ಅವರನ್ನು ಮಟ್ಟ ಹಾಕಲು ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿನ ಕಾನೂನು ಸುವ್ಯವಸ್ಥೆ ಮತ್ತು ಇಲಾಖೆಯ ಮೂಲ ಸೌಕರ್ಯಗಳ ಕುರಿತು ಮಾಹಿತಿ ಪಡೆಯಲಾಗಿದೆ. ಆಂಧ್ರ, ತೆಲಂಗಾಣ ಗಡಿಯಲ್ಲಿ ಮುಖ್ಯ ರಸ್ತೆ ಜತೆಗೆ ಹಳ್ಳಿ ರಸ್ತೆಗಳಲ್ಲಿ ಅಪರಾಧಿಗಳ ಚಲನವನಗಳ ಮೇಲೆ ನಿಗಾವಹಿಸುವಂತೆ ತಿಳಿಸಲಾಗಿದೆ.
ಹೊಸ ಠಾಣೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಇಲಾಖೆ ಮಾನದಂಡವನ್ನು ಅನುಸರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಐಜಿಗೆ ತಿಳಿಸಲಾಗಿದೆ. ಪ್ರಮುಖವಾಗಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಅದಕ್ಕೆ ಐಟಿ ತಜ್ಞರ ಅವಶ್ಯಕತೆಯಿದ್ದು, ನೇಮಕಕ್ಕೆ ಪ್ರಯತ್ನ ನಡೆಸಲಾಗುವುದು ಎಂದರು.
ಶಾಸಕರಾದ ಡಾ.ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ, ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್, ಪಕ್ಷದ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಮುಖಂಡರಾದ ತ್ರಿವಿಕ್ರಮ ಜೋಷಿ, ರಾಜಕುಮಾರ, ಬಿ.ಗೋವಿಂದ, ಸಣ್ಣ ನರಸಿಂಹನಾಯಕ, ಬಂಡೇಶ ವಲ್ಕಂದಿನ್ನಿ, ವಿಜಯರಾಜೇಶ್ವರಿ ಹಾಗೂ ಇತರರಿದ್ದರು.