ಚಿತ್ರ: ನಾ ಕೋಳಿಕ್ಕೆ ರಂಗ
ನಿರ್ದೇಶನ: ಗೊರವಾಲೆ ಮಹೇಶ್
ನಿರ್ಮಾಣ: ಎಸ್.ಟಿ. ಸೋಮಶೇಖರ್
ತಾರಾಗಣ: ಮಾಸ್ಟರ್ ಆನಂದ್, ಭವ್ಯ, ರಾಜೇಶ್ವರಿ, ಶೋಭರಾಜ್, ಬಿರಾದಾರ್, ಹೊನ್ನವಳ್ಳಿ ಕೃಷ್ಣ, ರಾಕ್ಲೈನ್ ಸುಧಾಕರ್, ಜೆಜೆ, ಶಕೀಲ ಮುಂತಾದವರು
| ಹರ್ಷವರ್ಧನ್ ಬ್ಯಾಡನೂರು
ಅದೊಂದು ಹಳ್ಳಿ. ಅಲ್ಲಿ ನಾಲ್ವರು ಗೆಳೆಯರ ತಂಡ. ಅದರಲ್ಲೊಬ್ಬ ರಂಗ (ಆನಂದ್). ಅವನೋ ಹುಟ್ಟು ಸೋಮಾರಿ. ಅಮ್ಮ ಸೋಬಾನೆ ಸಣ್ಣಕ್ಕ (ಭವ್ಯ) ಮತ್ತು ಸುಕ್ಕಾರಾಜ ಎಂಬ ಹುಂಜವೇ ಆತನ ಪ್ರಪಂಚ. ರಂಗನ ಮುಗ್ಧತೆಯೇ ಆತನಿಗೆ ಕೆಲವೊಮ್ಮೆ ಮುಳುವಾಗುತ್ತಿರುತ್ತದೆ. ಜತೆಗೆ ಗುಡ್ಡಪ್ಪ (ಸುಧಾಕರ್), ಮುನಿಯ (ಬಿರಾದಾರ್), ಹೊನ್ನವಳ್ಳಿ ಕೃಷ್ಣ ಊರಿನ ಪಟೇಲರಿಗೆ ರಂಗನ ವಿರುದ್ಧ ದೂರು ನೀಡುತ್ತಾರೆ. ಮತ್ತೊಂದೆಡೆ ಗೆಳೆಯನ ಪ್ರೀತಿಗೆ ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುವ ರಂಗ ರೌಡಿಯೊಬ್ಬನ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಹೀಗೆ ಸಮಸ್ಯೆಗೆ ಸಿಲುಕುವ ರಂಗ ದೆವ್ವವನ್ನು ನೋಡಿ ಮೂರ್ಛೆ ಹೋಗುತ್ತಾನೆ. ಆತ ಮತ್ತೆ ಹುಷಾರಾಗಬೇಕೆಂದರೆ ಸುಕ್ಕಾರಾಜನನ್ನು ಊರ ಜಾತ್ರೆಯಲ್ಲಿ ಬಲಿ ಕೊಡಬೇಕು ಎಂದು ಕಂಡೀಷನ್ ಹಾಕುತ್ತಾನೆ. ಹಾಗಾದರೆ ರಂಗನಿಗಾಗಿ ಸುಕ್ಕಾರಾಜ ಬಲಿಯಾಗುತ್ತಾನಾ? ಸಮಸ್ಯೆಗಳನ್ನು ರಂಗ ಗೆಲ್ಲುತ್ತಾನಾ? ‘ನಾ ಕೋಳಿಕ್ಕೆ ರಂಗ’ ಸಿನಿಮಾ ನೋಡಿ.
ಇದನ್ನೂ ಓದಿ : ಬಂಜಾರ ಸಂಸ್ಕೃತಿ ಕುರಿತ ಭಾಯ್ ಚಿತ್ರದಲ್ಲಿ ಯುವ ಮತ್ತು ಪೂಜಾ
ನಿರ್ದೇಶಕ ಗೊರವಾಲೆ ಮಹೇಶ್ ಮೊದಲರ್ಧದಲ್ಲಿ ಗೆದ್ದಿದ್ದಾರೆ. ಪಾತ್ರಗಳ ಪರಿಚಯ ಮಾಡಿಸುತ್ತಾ, ನಗಿಸುತ್ತಾ ಎಲ್ಲೂ ಬೋರ್ ಹೊಡೆಸದಂತೆ ಪ್ರೇಕ್ಷಕರನ್ನು ಕಥೆಯೊಳಗೆ ಕರೆದೊಯ್ಯುತ್ತಾರೆ. ದ್ವಿತೀಯಾರ್ಧದಲ್ಲಿ ಸ್ವಲ್ಪ ಸೀರಿಯಸ್ ಆಗುವ ಕಥೆ ಅಲ್ಲಲ್ಲಿ ಟ್ರ್ಯಾಕ್ನಿಂದ ಆಚೀಚೆ ಹೋದಂತೆ ಅನ್ನಿಸುತ್ತದೆ. ಕೊನೆಗೆ ಹರಕೆ, ಆಚರಣೆ ಎನ್ನುತ್ತಾ ಮೂಢ ನಂಬಿಕೆಗಳನ್ನು ಪಾಲಿಸುವುದಕ್ಕಿಂತ ಪ್ರೀತಿ, ಸಹೋದರತ್ವ ಮುಖ್ಯ ಎಂದು ಸಂದೇಶ ಸಾರಿದ್ದಾರೆ. ರಾಜು ಎಮ್ಮಿಗನೂರು ಸಂಗೀತದಲ್ಲಿ ಪುನೀತ್ ರಾಜಕುಮಾರ್ ಹಾಡಿರುವ ಟೈಟಲ್ ಸಾಂಗ್ ಮತ್ತು ಕೈಲಾಶ್ ಖೇರ್ ಧ್ವನಿಯಾಗಿರುವ ‘ಮರೆಯುವುದುಂಟೇ ಮೈಸೂರು ದೊರೆಯ’ ಹಾಡುಗಳು ಇಷ್ಟವಾಗುತ್ತವೆ. ಧನಪಾಲ್ ನಾಯಕ್ ಛಾಯಾಗ್ರಹಣ ಮತ್ತು ಎನ್.ಎಂ.ವಿಶ್ವ ಸಂಕಲನ ಚಿತ್ರಕ್ಕೆ ಪೂರಕವಾಗಿವೆ.
ಇದನ್ನೂ ಓದಿ : ನವರಸನ್ ಸಾರಥ್ಯದ ‘ಎಂಎಂಬಿ ಲೆಗೆಸ್ಸಿ’ಗೆ ಮೊದಲ ವರ್ಷದ ಸಂಭ್ರಮ
ಈ ಚಿತ್ರದ ಮೂಲಕ ನಾಯಕನಾಗಿರುವ ಮಾಸ್ಟರ್ ಆನಂದ್ ಚಿತ್ರದ ಪ್ರಮುಖ ಆಕರ್ಷಣೆ. ಅಷ್ಟು ಅಂದವಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಸೋಮಾರಿ ಮಗನನ್ನು ದಾರಿಗೆ ತರಲು ಶತಾಯಗತಾಯ ಪ್ರಯತ್ನಿಸುವ ತಾಯಿಯ ಪಾತ್ರದಲ್ಲಿ ಭವ್ಯ ಗಮನ ಸೆಳೆಯುತ್ತಾರೆ. ಉಳಿದಂತೆ ರಾಜೇಶ್ವರಿ, ಶೋಭರಾಜ್, ಬಿರಾದಾರ್, ಹೊನ್ನವಳ್ಳಿ ಕೃಷ್ಣ, ರಾಕ್ಲೈನ್ ಸುಧಾಕರ್, ಜೆಜೆ, ಶಕೀಲ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.