ಮಸ್ಕಿ: ಜಿಲ್ಲೆಯಲ್ಲಿ ಮಳೆಯಿಂದ ಮಸ್ಕಿ ತಾಲೂಕಿನಲ್ಲಿ ಅತಿ ಹೆಚ್ಚಿನ ಹಾನಿಯಾಗಿದೆ. ಮಳೆಹಾನಿ ಪರಿಹಾರಕ್ಕಾಗಿ ಸರ್ಕಾರದಿಂದ ಹೆಚ್ಚುವರಿಯಾಗಿ 10 ಕೋಟಿ ರೂ. ಬಂದಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದರು.
ತಹಸಿಲ್ ಕಚೇರಿಯಲ್ಲಿ ಬುಧವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು. ಎನ್ಡಿಆರ್ಎಫ್ ನಿಯಮಗಳಡಿ ಮಳೆ ಹಾನಿ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಖಾತೆಯಿಂದ ತಾಲೂಕು ಅಧಿಕಾರಿಗಳ ಖಾತೆಗೆ ತಲಾ ಒಂದು ಕೋಟಿ ರೂ. ನೀಡಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಯಾವುದೇ ಕಾರಣಕ್ಕೂ ಮಳೆ ಹಾನಿಯಿಂದ ತೊಂದರೆಯಾದವರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಾಲೂಕು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸ್ಥಳೀಯ ತಹಸಿಲ್ ಕಚೇರಿಗೆ ಅಗತ್ಯ ಸಿಬ್ಬಂದಿಯನ್ನು ಶೀಘ್ರ ನೇಮಕ ಮಾಡಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ತಾಲೂಕು ಆಡಳಿತ ಸೌಧ ನಿರ್ಮಾಣಕ್ಕಾಗಿ ಗುರುತಿಸಿರುವ ಜಾಗ ನೀರಾವರಿ ನಿಗಮಕ್ಕೆ ಸೇರಿದ್ದರಿಂದ, ಆ ಇಲಾಖೆಗೆ ಬೇಕಾದ ಭೂಮಿ ಹೂವಿನಬಾವಿ ಗ್ರಾಮದಲ್ಲಿ ಇದ್ದು, ಹಸ್ತಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತಾಲೂಕಿನಲ್ಲಿ ಶೀಘ್ರ ತಾಲೂಕು ಕಚೇರಿಗಳು ಆರಂಭವಾಗಲಿವೆ ಎಂದರು. ತಹಸೀಲ್ದಾರ್ ಕವಿತಾ ಆರ್. ಇದ್ದರು.