ಮಾನ್ವಿ: ಪಟ್ಟಣದ ನಂಜನಗೂಡು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೆ.3 ರಂದು ನಡೆಯುವ ಜಗನ್ನಾಥದಾಸರ 213 ನೇ ಆರಾಧನೆ ಜರುಗಲಿದೆ. ಪೂರ್ವರಾಧನೆ ಅಂಗವಾಗಿ ಶುಕ್ರವಾರ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಜಗನ್ನಾಥದಾಸರ ತಂಬೂರಿ ಹಿಡಿದು ಗೋಪಾಳಂ ಸೇವೆ ನಡೆಸಲಾಯಿತು. ಜಗನ್ನಾಥದಾಸರ ಸನ್ನಿದಾನದ ಅರ್ಚಕರು ಹಾಗೂ ವಿವಿಧ ಭಜನ ಮಂಡಳಿಗಳು ಮನೆ ಮನೆಗೆ ತೆರಳಿ ಭಕ್ತರು ನೀಡಿದ ದವಸ ಧಾನ್ಯ, ಕಾಣಿಕೆಗಳನ್ನು ಪಡೆದರು. ಸಂಗ್ರಹವಾದ ದವಸ, ಧಾನ್ಯಗಳಿಂದ ದೇವಸ್ಥಾನದಲ್ಲಿ ನೈವೇದ್ಯ ಪದಾರ್ಥಗಳನ್ನು ತಯಾರಿಸಲಾಯಿತು. ಸಂಜೆ ಗೋಪೂಜೆ, ಧ್ವಜಾರೋಹಣ, ಲಕ್ಷ್ಮೀ ಪೂಜೆ, ಧಾನ್ಯ ಪೂಜೆ, ಸ್ವಸ್ತಿವಾಚನ ಮತ್ತು ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಆರಾಧನೆಗೆ ಚಾಲನೆ ನೀಡಲಾಯಿತು. ಈ ವೇಳೆ ರವಿ ಆಚಾರ್ಯ, ರಮೇಶ, ಲಕ್ಷ್ಮೀಕಾಂತ, ಜೋಷಿ, ರಘೋತ್ತಮ ಗುತ್ತಲ ಇದ್ದರು.