ಪುರಸಭೆ ಸಾಮಾನ್ಯ ಸಭೆ
ಮಾನ್ವಿ: ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ, ಚರಂಡಿ ಸೇರಿದಂತೆ ಇತರ ಮೂಲ ಸೌಲಭ್ಯ ಕಲ್ಪಿಸಬೇಕೆಂದು ರಾಜಾ ಮಹೇಂದ್ರ ನಾಯಕ ಆಗ್ರಹಿಸಿದರು.
ಪುರಸಭೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪಟ್ಟಣದಿಂದ ಕೆಲವೇ ಕಿ.ಮೀ. ದೂರದಲ್ಲಿ ತುಂಗಭದ್ರಾ ನದಿ ಹರಿಯುತ್ತಿದೆ. ಶಾಶ್ವತ ಕುಡಿಯುವ ನೀರಿನ ಕೆರೆಯೂ ಇದೆ. ಆದರೂ, ಜನರಿಗೆ ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರತೆ ಪಡೆಯಲಿದೆ ಎಂದು ಮುಖ್ಯಾಧಿಕಾರಿ ಜಗದೀಶ ಭಂಡಾರಿ ವಿರುದ್ಧ ಹರಿಹಾಯ್ದರು.
2018-19ನೇ ಸಾಲಿನಲ್ಲಿ ಸಹಾಯಧನ ಕೋರಿ ಅಂಗವಿಕಲರಿಂದ ಬಂದಿದ್ದ 200 ಅರ್ಜಿಗಳ ಪೈಕಿ ಕೇವಲ 24 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲರಿಗೂ ಸಹಾಯಧನ ನೀಡಬೇಕು. 2020 ನೇ ಸಾಲಿನ ಪುರಸಭೆ ಆದಾಯ ಮತ್ತು ವೆಚ್ಚದಲ್ಲಿ ಲೋಪದೋಷಗಳಿದ್ದು ಸರಿಪಡಿಸಬೇಕೆಂದು ರಾಜಾ ಮಹೇಂದ್ರ ನಾಯಕ ಒತ್ತಾಯಿಸಿದರು. ಅಧ್ಯಕ್ಷೆ ಸುಫಿಯಾ ಬೇಗಂ, ಉಪಾಧ್ಯಕ್ಷ ಕೆ.ಶುಕಮುನಿ, ಲಕ್ಷ್ಮಿದೇವಿ ನಾಯಕ, ಶರಣಪ್ಪಗೌಡ, ಸಾಬೀರ್ ಪಾಷ, ಶೇಖ್ ಫರೀದ್ ಉಮ್ರಿ, ಇಬ್ರಾಹಿಂ ಖುರೇಶಿ, ಶರಣಪ್ಪ
ಮೇದಾ, ರೇವಣಸಿದ್ದಯ್ಯಸ್ವಾಮಿ, ಮೀನಾಕ್ಷಮ್ಮ, ಸಂತೋಷಮ್ಮ, ಅಮ್ಜದ್ಖಾನ್, ಭಾಷಾಸಾಬ್, ವೆಂಕಟೇಶ ನಾಯಕ, ಬಸವರಾಜ ಭಜಂತ್ರಿ, ಬಸ್ಸಮ್ಮ ಭೋವಿ, ಸೂರ್ಯಕುಮಾರಿ, ಶೈನಾಜಾ ಬೇಗಂ, ನೀಲಮ್ಮ, ವನಿತಾ, ರೇಷ್ಮಾ ಬೇಗಂ ಇದ್ದರು.