ಮಾನ್ವಿ: ತಾಲೂಕಿನ ನೀರಮಾನ್ವಿ ಹಾಗೂ ಬೆಟ್ಟದೂರು ಗ್ರಾಮಗಳ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವನ್ಯಜೀವಿ, ಜೀವಶಾಸ್ತ್ರ ತಜ್ಞರ ತಂಡ ಶನಿವಾರ ಆಗಮಿಸಿ ಗುಡ್ಡದ ಸುತ್ತಮುತ್ತಲಿನ ಪ್ರದೇಶ ಪರಿಶೀಲನೆ ನಡೆಸಿತು.
ಆರು ತಿಂಗಳಿಂದ ಚಿರತೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕದ ಮೂಡಿದೆ. ಚಿರತೆ ಸೆರೆಗೆ ವಲಯ ಅರಣ್ಯ ಅಧಿಕಾರಿ ರಾಜೇಶನಾಯಕ ಮತ್ತು ಸಿಬ್ಬಂದಿ ಪ್ರಯತ್ನ ನಡೆಸಿತ್ತು. ಗುಡ್ಡದಲ್ಲಿ ಮತ್ತು ಕೆರೆ ಬಳಿ ಬೋನು ಅಳವಡಿಸಿದ್ದರೂ ಸೆರೆ ಸಿಕ್ಕಿರಲಿಲ್ಲ. ಕಳೆದ ಎರಡ್ಮೂರು ದಿನಗಳಿಂದ ಚಿರತೆ ತನ್ನ ಮರಿಗಳೂಂದಿಗೆ ನೀರಮಾನ್ವಿ ಹಾಗೂ ಬೆಟ್ಟದೂರು ಹೊಲ-ಗದ್ದೆಗಳಲ್ಲಿ ಸಂಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ತಜ್ಞರಾದ ಡಾ.ವಾಣಿ, ಡಾ.ಅಪರ್ಣಾ, ಜೀವಶಾಸ್ತ್ರ ತಜ್ಞ ಮಹೇಂದ್ರ ಆಗಮಿಸಿದ್ದಾರೆ. ಈ ತಂಡ ಗುಡ್ಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡು ಬಿಟ್ಟು ಚಿರತೆ ಸೆರೆ ಕಾರ್ಯಾಚರಣೆ ನಡೆಸಲಿದೆ.