ನವದೆಹಲಿ: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭ ಹಿನ್ನೆಲೆಯಲ್ಲಿ ಈ ಬಾರಿ ಸುಗಮ ಕಲಾಪ ನಡೆಯುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಇದೇ ಸಂದರ್ಭದಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು.
ಸಂಸತ್ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಇಂದು ನಾವು ಈ ಪ್ರಜಾಪ್ರಭುತ್ವದ ದೇವಾಲಯದಲ್ಲಿ ಪವಿತ್ರ ಮಾಸ ಶ್ರಾವಣದಲ್ಲಿ ಭೇಟಿಯಾಗುತ್ತಿರುವ ಸುಸಂದರ್ಭದಲ್ಲಿ ಎಲ್ಲ ಸಂಸದರು ಒಟ್ಟಾಗಿ ಜನರ ಗರಿಷ್ಠ ಕಲ್ಯಾಣಕ್ಕಾಗಿ ಅಧಿವೇಶವನ್ನು ಬಳಸುತ್ತಾರೆ ಮತ್ತು ಸಂಸದರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
#WATCH | Before the commencement of the Monsoon Session of Parliament, PM Narendra Modi says, "Today, when we are meeting in the holy month of Sawan in this temple of democracy…I am confident that all the MPs, together, will use this for the maximum welfare of people and carry… pic.twitter.com/t1nMM44WWm
— ANI (@ANI) July 20, 2023
ಈ ಬಾರಿ ಸುಗಮ ಕಲಾಪ ನಡೆಯಲು ವಿಪಕ್ಷಗಳು ಅನುವು ಮಾಡಿಕೊಡುತ್ತವೆ ಎಂಬ ಭರವಸೆ ನನಗಿದೆ. ಎಲ್ಲ ವಿಚಾರಗಳ ಬಗ್ಗೆಯೂ ಮುಕ್ತ ಚರ್ಚೆಗೆ ಅವಕಾಶವಿದೆ. ಹಲವು ವಿಧೇಯಕಗಳು ಮಂಡನೆಯಾಗಲಿದ್ದು, ಈ ವಿಧೇಯಕಗಳು ದೇಶದ ಕಾನೂನಿನ ರಕ್ಷಣೆಗೆ ಸಹಕಾರಿಯಾಗಿರಲಿವೆ ಎಂದರು.
ಇದನ್ನೂ ಓದಿ: ಅಜಯ್ ದೇವಗನ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನಟಿ ಕಾಜೋಲ್ ಲಿಪ್ಲಾಕ್ ಮಾಡಿದ್ರಾ?
ನಾಚಿಕೆಗೇಡಿನ ಘಟನೆ
ಇದೇ ಸಂದರ್ಭದಲ್ಲಿ ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಘಟನೆ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ನಾಗರಿಕ ಸಮಾಜ ತಲೆತಗ್ಗಿಸುವಂತಹ ನಾಚಿಕೆಗೇಡಿನ ಘಟನೆ ಇದಾಗಿದೆ ಮತ್ತು ಈ ಘಟನೆಯಿಂದ ನನಗೆ ನೋವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಅಲ್ಲದೆ, ಯಾವೊಬ್ಬ ಆರೋಪಿಗಳನ್ನು ಬಿಡುವ ಮಾತೇ ಇಲ್ಲ ಎಂದು ಭರವಸೆ ನೀಡಿದರು.
ರಾಜಕೀಯಕ್ಕಿಂತ ಮೇಲೇರಬೇಕು
ರಾಜಸ್ಥಾನ, ಮಣಿಪುರ ಅಥವಾ ಛತ್ತೀಸ್ಗಢ ಯಾವುದೇ ಆಗಿರಲಿ, ನಮ್ಮ ಎಲ್ಲ ಮಹಿಳೆಯರಿಗೆ ರಕ್ಷಣೆ ನೀಡುವಂತೆ ನಾನು ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಮಹಿಳೆಯರನ್ನು ರಕ್ಷಿಸಲು ನಾವು ರಾಜಕೀಯಕ್ಕಿಂತ ಮೇಲೇರಬೇಕು ಎಂದು ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿ ಹೇಳಿದರು.
ಏನಿದು ಮಣಿಪುರ ಘಟನೆ?
ಮಣಿಪುರದ ಕೊಂಗ್ಪೊಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆಯರಿಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲದೆ, ಸಂತ್ರಸ್ತರ ಮೇಲೆ ಗ್ಯಾಂಗ್ರೇಪ್ ಮಾಡಿದ್ದಾರೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಆರೋಪ ಮಾಡಿದೆ. ಮಣಿಪುರ ರಾಜಧಾನಿ ಇಂಫಾಲ್ನಿಂದ 35 ಕಿ.ಮೀ. ಅಂತರದಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಈ ಸಂಬಂಧ ಎಫ್ಐಆರ್ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಣಿಪುರ ಸಿಎಂ ಬೈರೆನ್ ಸಿಂಗ್ ಸಹ ತನಿಖೆ ಆದೇಶ ನೀಡಿದ್ದಾರೆ. (ಏಜೆನ್ಸೀಸ್)
ಎನ್ಡಿಎ ಜೊತೆ ಹೋಗಲು ಕುಮಾರಸ್ವಾಮಿ ತಯಾರಿ; ದೇವೇಗೌಡರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ
ಶಂಕಿತ ಉಗ್ರರ ಬಂಧನ ಪ್ರಕರಣ: ಕುರಿ ವ್ಯಾಪಾರಿಯಾಗಿದ್ದ ಜುನೈದ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ಹೇಗೆ?