ಮಂಗಳೂರು: ಉಗ್ರ ಸಂಘಟನೆ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಪ್ರಮುಖ ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಹಾಗೂ ಲ್ಯಾಪ್ಟಾಪ್ಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ತನಿಖಾ ತಂಡ ವರದಿಯ ನಿರೀಕ್ಷೆಯಲ್ಲಿದೆ.
ಬಂಧಿತ ಮೂವರ ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೊಬೈಲ್ ಫೋನ್ನಿಂದ ಎಲ್ಲೆಲ್ಲಿಗೆ ಕರೆ ಮಾಡಿದ್ದಾರೆ ಹಾಗೂ ಏನೇನು ಮಾತನಾಡಿದ್ದಾರೆ ಎಂಬ ಮಾಹಿತಿಯನ್ನು ಸೈಬರ್ ಪೊಲೀಸರ ನೆರವಿನಲ್ಲಿ ತನಿಖಾ ತಂಡ ಪತ್ತೆ ಮಾಡಿದೆ. ಆರೋಪಿಗಳಿಂದ ಲ್ಯಾಪ್ಟಾಪ್ ಕೂಡ ವಶಪಡಿಸಿ ಅದರಿಂದ ಮಾಹಿತಿ ಪಡೆಯುವ ಪ್ರಯತ್ನವನ್ನು ಪೊಲೀಸರು ನಡೆಸಿದ್ದಾರೆ.
ಕೆಲ ಮಾಹಿತಿಗಳು ನಿಗೂಢವಾಗಿರುವುದರಿಂದ ಲ್ಯಾಪ್ಟಾಪನ್ನೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಬಂಧಿತ ಆರೋಪಿಗಳ ನಂಟಿನ ಕುರಿತು ನಿಖರ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈಗಾಗಲೇ ಸೌದಿಯಲ್ಲಿರುವ ತೀರ್ಥಹಳ್ಳಿ ಮೂಲದ ವ್ಯಕ್ತಿಗೆ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಈ ಉಗ್ರ ಗೋಡೆ ಬರಹ ಕೃತ್ಯದ ಮಾಸ್ಟರ್ ಮೈಂಡ್ ಈತ ಎಂದು ಹೇಳಲಾಗಿದ್ದು, ಆತನ ಬಂಧನದಿಂದ ಮಹತ್ವದ ಮಾಹಿತಿ ಲಭಿಸುವ ನಿರೀಕ್ಷೆಯಲ್ಲಿ ಪೊಲೀಸರು ಇದ್ದಾರೆ.