ಮಂಗಳೂರು/ಉಡುಪಿ: ಕರಾವಳಿಯಲ್ಲಿ ಮಂಗಳವಾರ 111 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ದ.ಕ ಜಿಲ್ಲೆಯಲ್ಲಿ 83, ಉಡುಪಿ ಜಿಲ್ಲೆಯಲ್ಲಿ 28 ಮಂದಿ ಸೋಂಕಿಗೊಳಗಾಗಿದ್ದಾರೆ. ದ.ಕ.ಜಿಲ್ಲೆಯಲ್ಲಿ 48 ಮಂದಿಗೆ ಪ್ರಾಥಮಿಕ ಸಂಪರ್ಕ, ಇಬ್ಬರಿಗೆ ದ್ವಿತೀಯ ಸಂಪರ್ಕದಲ್ಲಿ ಸೋಂಕು ತಗಲಿದ್ದರೆ ಐಎಲ್ಐ ಲಕ್ಷಣಗಳಿದ್ದ 20 ಜನ, ತೀವ್ರ ಉಸಿರಾಟ ತೊಂದರೆಯ ಒಬ್ಬರಿಗೆ ಕರೊನಾ ದೃಢಪಟ್ಟಿದೆ.
ರ್ಯಾಂಡಮ್ ಸ್ಯಾಂಪ್ಲಿಂಗ್ನಲ್ಲಿ ಮೂವರಿಗೆ ಸೋಂಕು ಬಂದಿದ್ದು ಚಿಕ್ಕಮಗಳೂರಿನಿಂದ ಹಿಂದಿರುಗಿದ ಇಬ್ಬರಿಗೆ, ಸರ್ಜರಿ ಪೂರ್ವ ತಪಾಸಣೆಯ ವೇಳೆ ಮೂವರಿಗೆ, ಪ್ರಸವಪೂರ್ವ ಸರ್ಜರಿ ತಪಾಸಣೆಯಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿದೆ. ಮೂವರ ಸಂಪರ್ಕ ಶೋಧ ನಡೆಯುತ್ತಿದೆ.
ದ.ಕ.ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1359ಕ್ಕೆ ಏರಿದ್ದು, ಖಾಸಗಿ ಆಸ್ಪತ್ರೆ ಸೇರಿದಂತೆ ಒಟ್ಟು 99 ಮಂದಿ ಗುಣವಾಗಿ ಮನೆ ಸೇರಿದ್ದಾರೆ. ಪ್ರಸ್ತುತ 650 ಪಾಸಿಟಿವ್ ಪ್ರಕರಣಗಳು ಸಕ್ರಿಯವಾಗಿವೆ. ಮೂವರನ್ನು ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಸರಗೋಡು ಜಿಲ್ಲೆಯ 13 ಮಂದಿಗೆ ಮಂಗಳವಾರ ಕೋವಿಡ್-19 ಸೋಂಕು ದೃಢಪಟ್ಟಿದೆ.
ಕೋವಿಡ್ಗೆ ಮೂಡುಬಿದಿರೆ ಪುರುಷ ಬಲಿ: ಮೂಡುಬಿದಿರೆಯ ಕರೊನಾ ಪೀಡಿತರೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ. ಈ ಮೂಲಕ ದ.ಕ.ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿದೆ. ಮೂಡುಬಿದಿರೆಯ 65 ವರ್ಷದ ಪುರುಷ ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಹಾಗೂ ನ್ಯುಮೋನಿಯದಿಂದ ಬಳಲುತ್ತಿದ್ದು, ಅವರನ್ನು ಜುಲೈ 3ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಮೃತನ ಮನೆಯ ನಾಲ್ವರಿಗೆ ಪಾಸಿಟಿವ್
ಸುರತ್ಕಲ್: ಜೂನ್ 28ರಂದು ಕರೊನಾದಿಂದ ಮೃತಪಟ್ಟಿದ್ದ ಇಡ್ಯಾದ ಯುವಕನ ಮನೆಯ ನಾಲ್ವರಿಗೆ, ಕುತ್ತೆತ್ತೂರು ಸಿಐಎಸ್ಎಫ್ ವಸತಿಗೃಹದಲ್ಲಿ 23 ಸಿಬ್ಬಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ.
ಒಂದೇ ದಿನ 1231 ಮಾದರಿ ಸಂಗ್ರಹ
ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 216 ವರದಿ ನೆಗೆಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1390ಕ್ಕೆ ಏರಿಕೆಯಾಗಿದೆ. 19 ಪುರುಷರು, 9 ಮಹಿಳೆಯರಿಗೆ ಪಾಸಿಟಿವ್ ಬಂದಿದೆ. ಇವರಲ್ಲಿ 6 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದ್ದು, ಅಂತರ್ ಜಿಲ್ಲಾ ಪ್ರಯಾಣದಿಂದ 7 ಮಂದಿಗೆ ಹಾಗೂ ಪಾಸಿಟಿವ್ ವ್ಯಕ್ತಿಗಳ ಸಂಪರ್ಕದಿಂದ 13 ಮಂದಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಿಂದ ಆಗಮಿಸಿದ ಓರ್ವ ಹಾಗೂ ವಿದೇಶದಿಂದ ಆಗಮಿಸಿದ ಒಬ್ಬರಿಗೆ ಪಾಸಿಟಿವ್ ಬಂದಿದೆ. ಮಂಗಳವಾರ ಕೋವಿಡ್ ಶಂಕಿತ 1231 ಮಂದಿಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 2627 ವರದಿ ನಿರೀಕ್ಷಿಸಲಾಗುತ್ತಿದೆ. ಇಲ್ಲಿವರೆಗೆ 1182 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 215 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸೋಲೇಶನ್ ವಾರ್ಡಿಗೆ 37 ಮಂದಿ ದಾಖಲಾಗಿದ್ದು, 21 ಮಂದಿ ಬಿಡುಗಡೆಯಾಗಿದ್ದಾರೆ.