ಮಂಡ್ಯ: 14 ಟನ್ ಕಬ್ಬು ತುಂಬಿದ್ದ ಗಾಡಿಯನ್ನು ಜೋಡೆತ್ತುಗಳಿಂದ ಎಳೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಸಾಮರ್ಥ್ಯಕ್ಕಿಂತ ಅಧಿಕ ಕಬ್ಬು ತುಂಬಿ ದಾಖಲೆ ಸೃಷ್ಟಿಸುವ ಆಸೆಗೆ ಬಿದ್ದ ಯುವಕರು ಇದೀಗ ಕಾನೂನು ಸಂಕಷ್ಟ ಎದುರಿಸುವಂತಾಗಿದೆ.
ಎರಡು ದಿನಗಳ ಹಿಂದೆ ಮಂಡ್ಯ ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ 14 ಟನ್ ಕಬ್ಬು ತುಂಬಿದ್ದ ಗಾಡಿಯನ್ನು ಜೋಡೆತ್ತುಗಳಿಂದ ಎಳೆಸಿದ್ದರು. ಎಚ್.ಮಲ್ಲಿಗೆರೆ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿರುವ ಜಿ.ಗುಂಡಿಪಟ್ಟಣ್ಣದ ಆಲೆಮನೆಗೆ 14 ಟನ್ ಕಬ್ಬು ಸಾಗಿಸಿ ಯುವಕರು ಸಾಹಸ ಮೆರೆದಿದ್ದರು.
ಗಾಡಿಯೊಂದಕ್ಕೆ ಸಾಮಾನ್ಯವಾಗಿ 4-5 ಟನ್ ಕಬ್ಬು ತುಂಬಲಾಗುತ್ತದೆ. ಈ ಹಿಂದೆ ಕೆ.ಎಂ.ದೊಡ್ಡಿಯಲ್ಲಿ 12 ಟನ್ ಕಬ್ಬನ್ನು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗಿತ್ತು ಎನ್ನಲಾಗಿದೆ. ಆ ದಾಖಲೆ ಮುರಿಯುವ ಸಲುವಾಗಿ ರಾಸುಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ 14 ಕಬ್ಬನ್ನು ಆಲೆಮನೆಗೆ ಯುವಕರು ಸಾಗಿಸಿದ್ದರು.
ಇದನ್ನೂ ಓದಿ: ‘ಸೆರೆಮನೆ’ಯಿಂದಲೇ ರಾಜಕೀಯ- ಎನ್ಡಿಎ ಶಾಸಕರಿಗೆ ಲಾಲು ‘ಬಲೆ’ !
2.90 ಲಕ್ಷ ರೂ. ಮೌಲ್ಯದ ರಾಸುಗಳು ಹುರುಗಲವಾಡಿ ಗ್ರಾಮದ ಶರತ್ ಅವರಿಗೆ ಸೇರಿದ್ದಾಗಿವೆ. ಕಬ್ಬು ತುಂಬಿದ ಗಾಡಿಯನ್ನು ನೋಡಲು ನೆರೆದಿದ್ದ ನಾಗರಿಕರು ಶಿಳ್ಳೆ ಹಾಕಿ, ಜೈಕಾರ ಕೂಗುತ್ತ ರಾಸುಗಳಿಗೆ ಬೆಂಬಲ ಸೂಚಿಸಿದ್ದರು.
ಪ್ರಾಣಿಪ್ರಿಯರ ಬೇಸರ: ಪ್ರಾಣಿಗಳನ್ನು ಹಿಂಸಿಸುವುದು ಸರಿಯಲ್ಲ. ಯುವಕರ ಮೋಜಿಗೆ ಪ್ರಾಣಿಗಳ ಮೇಲೆ ಬಲಪ್ರಯೋಗ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪರ -ವಿರೋಧ ಚರ್ಚೆಯಾಗಿತ್ತು.
ಕೆರಗೋಡು ಪೊಲೀಸರಿಂದ ಪ್ರಕರಣ ದಾಖಲು
ಮೂಕಪ್ರಾಣಿಗಳ ಮೇಲಿನ ಹಿಂಸೆ ತಡೆಗಟ್ಟುವ ಕಾಯ್ದೆಯಡಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಎಚ್.ಮಲ್ಲಿಗೆರೆ ಗ್ರಾಮದ ರಂಜು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಕಬ್ಬು ಎಳೆಸುವಾಗ ಎತ್ತುಗಳಿಗೆ ಹಿಂಸೆ ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.