ಮಂಡ್ಯ: ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ನಡೆದಿದ್ದ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಘಟನೆ ನಡೆದ 30 ಘಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದು, ಹತ್ಯೆ ಹಿಂದಿನ ನಿಖರ ಕಾರಣವನ್ನು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಬಂಧಿತ ಆರೋಪಿ ನಿತೇಶ್ ದೀಪಿಕಾಳನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ದೀಪಿಕಾ ಕೊಲೆ ಮಾಡುವ ಮುನ್ನವೇ ಗುಂಡಿ ತೋಡಿದ್ದ ಎಂದು ವಿವರಿಸಿದ್ದಾರೆ.
ದೀಪಿಕಾ ಹಾಗೂ ನಿತೇಶ್ ನಡುವೆ ವರ್ಷದಿಂದ ಸ್ನೇಹ ಇತ್ತು. ದಿನ ನಿತ್ಯ ಕಾಲ್, ಮೆಸೇಜ್ ಚಾಟ್ ನಲ್ಲಿ ಇಬ್ಬರು ನಿರತರಾಗುತ್ತಿದ್ದರು. ಆಗಾಗ ಭೇಟಿ ಸಹ ಆಗುತ್ತಿದ್ದರು. ಕೆಲ ದಿನಗಳಿಂದ ಇಬ್ಬರ ನಡುವೆ ವಿಚಾರ ಒಂದಕ್ಕೆ ಮನಸ್ತಾಪ ಉಂಟಾಗಿತ್ತು. ಇದರ ವಿಚಾರವಾಗಿ ಇಬ್ಬರ ನಡುವೆ ಆಗಿಂದಾಗೆ ಗಲಾಟೆ ನಡೆಯುತ್ತಿತ್ತು. ನಿತೇಶ್ ದೀಪಿಕಾಳನ್ನು ಭೇಟಿ ಮಾಡು ಎಂದಾಗ ದೀಪಿಕಾ ಸಿಗುತ್ತಿರಲಿಲ್ಲ. ಆದ್ರೆ ಆಕೆ ಕರೆದಾಗ ನಿತೀಶ್ ಹೋಗಲೇ ಬೇಕಿತ್ತು.
ಇದನ್ನೂ ಓದಿ: ರಾಮಮಂದಿರದಲ್ಲಿ ಹೆಚ್ಚಿದ ಭಕ್ತರ ದಂಡು; ಅಯೋಧ್ಯೆಗೆ ಬಸ್ ಸೇವೆ ಸ್ಥಗಿತ
ಇದರಿಂದ ಸಿಟ್ಟಿಗೆದ್ದ ಆರೋಪಿ ನಿತೇಶ್ ಆಕೆಯ ಕೊಲೆ ಮಾಡಲು ಸಂಚು ರೂಪಿಸಿದ. ಅದರಂತೆ ಜನವರಿ 20 ರಂದು ಮೇಲುಕೋಟೆಯಲ್ಲಿರುವ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಬೆಟ್ಟದ ತಪ್ಪಲೊಗೆ ಬರುವಂತೆ ಸೂಚಿಸಿದ. ಅಲ್ಲದೇ ದೀಪಿಕಾ ಬೆಟ್ಟದ ತಪ್ಪಲಿಗೆ ಬರುವ ಮುನ್ನವೇ ಹೂತು ಹಾಕಲು ಗುಂಡಿ ಸಹ ತೆಗೆದಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಬೆಟ್ಟದ ತಪ್ಪಲಿಗೆ ದೀಪಿಕಾ ಬರುತ್ತಿದ್ದಂತೆ ಜಗಳವಾಡಲು ಶುರು ಮಾಡಿದ ಆರೋಪಿ ಆಕೆಯ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ತೋಡಿದ್ದ ಗುಂಡಿಯಲ್ಲಿ ಆಕೆಯನ್ನು ಮಣ್ಣು ಮಾಡಿ ತೆರಳಿದ್ದಾನೆ. ಮಾರನೇ ಮೈಸೂರಿಗೆ ಕೆಲಸಕ್ಕೂ ತೆರಳಿದ್ದ. ಎರಡು ದಿನ ಊರನಲ್ಲಿಯೇ ಇದ್ದು ಅನುಮಾನ ಬಾರದಂತೆ ವರ್ತಿಸುತ್ತಿದ್ದ. ಆದರೆ, ದೀಪಿಕಾಳ ಶವ ಪತ್ತೆಯಾಗ್ತಿದ್ದಂತೆ ಊರಿಂದ ಎಸ್ಕೇಪ್ ಆಗಿದ್ದ. ಬಳಿಕ ಹೊಸಪೇಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿ ತಾನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ವಿಚಾರಣೆಯನ್ನು ಮುಂದುವರೆಸಲಾಗಿದೆ. ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ತಿಳಿಸಿದ್ದಾರೆ.