ಬೆಂಗಳೂರು: ‘ಪತ್ನಿಗೆ ಹಣದಾಹ ಹೆಚ್ಚು. ಎಷ್ಟು ದುಡಿದರೂ ಆಕೆಗೆ ಇನ್ನಷ್ಟು ಹಣಬೇಕಾಗಿತ್ತು. ಜೀವನದಲ್ಲಿ ನೆಮ್ಮದಿಯೇ ಇಲ್ಲ. ಜೀವನದಲ್ಲಿ ಇಂತಹ ಹೆಂಗಸು ನನಗೆ ಬೇಡ. ಮಗನೇ ನಿಮ್ಮ ಅಮ್ಮ ಸರಿಯಿಲ್ಲ. ಆಕೆ ಜತೆ ಇರಬೇಡ…’ ಎಂದು ಡೆತ್ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬ ಸಾವಿನ ಮನೆಯ ಕದ ತಟ್ಟಿರುವ ಘಟನೆ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪತ್ನಿಯ ಹಣದಾಹಕ್ಕೆ ಮನನೊಂದ ಪತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಹೆಸರು ಅಣ್ಣಯ್ಯ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಣ್ಣಯ್ಯ ಮತ್ತು ಉಮಾ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಮಗ ಇದ್ದಾನೆ. ಅಣ್ಣಯ್ಯ ಬನಶಂಕರಿಯ ಬಾರ್ವೊಂದರಲ್ಲಿ ಕ್ಯಾಶಿಯರ್ ಆಗಿದ್ದ. ಉಮಾ ಮನೆಯಲ್ಲೇ ಇರುತ್ತಿದ್ದರು. ದಂಪತಿ ಶ್ರೀನಿವಾಸನಗರದಲ್ಲಿ ವಾಸವಾಗಿದ್ದರು.
ಈ ಮಧ್ಯೆ ಪತ್ನಿ ಉಮಾ ಹೆಚ್ಚಿನ ಹಣಕ್ಕಾಗಿ ಪತಿ ಅಣ್ಣಯ್ಯಗೆ ಪೀಡಿಸುತ್ತಿದ್ದಳು. ಅದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ಇದರಿಂದ ಬೇಸತ್ತ ಅಣ್ಣಯ್ಯ ಡೆತ್ನೋಟ್ ಬರೆದಿಟ್ಟು ಮನೆಯಲ್ಲಿ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಣ್ಣಯ್ಯ ಬರೆದ ಡೆತ್ನೋಟ್ ವೈರಲ್ ಆಗಿದೆ. ‘ಜೀವನದಲ್ಲಿ ನನಗೆ ನೆಮ್ಮದಿಯೇ ಇಲ್ಲ. ನನ್ನ ಸಾವಿಗೆ ನನ್ನ ಹೆಂಡತಿಯೇ ಕಾರಣ. ಏಕೆಂದರೆ ಅವಳಿಗೆ ದುಡ್ಡೇ ಮುಖ್ಯ. ನಾನು ಏನೇ ಕೆಲಸ ಮಾಡಿದರೂ ನನ್ನ ಹೆಂಡತಿಗೆ ಇಷ್ಟ ಇಲ್ಲ. ಆದರೂ ಅವಳಿಗೆ ದುಡ್ಡು ಬೇಕು. ಎಷ್ಟು ದುಡಿದರೂ ಆಕೆಗೆ ಇನ್ನಷ್ಟು ಹಣಬೇಕಾಗಿತ್ತು. ದೇವರೇ ಇಂತಹ ಹೆಂಗಸು ನನಗೆ ಬೇಡ. ಯಾವ ಹುಡುಗರಿಗೂ ಇಂತಹ ಹೆಂಡತಿ ಸಿಗೋದು ಬೇಡ. ಜೀವನದಲ್ಲಿ ಇಂತಹ ಹೆಂಗಸು ನನಗೆ ಬೇಡ. ಮಗನೇ ನಿಮ್ಮ ಅಮ್ಮ ಸರಿಯಿಲ್ಲ. ಆಕೆ ಜತೆ ಇರಬೇಡ… ಮಿಸ್ ಯೂ ಮಗನೇ’ ಎಂದು ಅಣ್ಣಯ್ಯ ಡೆತ್ನೋಟ್ ಬರೆದಿದ್ದಾರೆ.