ಚಿಕ್ಕಬಳ್ಳಾಪುರ: ನಂದಿಬೆಟ್ಟದ ಬಳಿ ಟ್ರೆಕ್ಕಿಂಗ್ಗೆ ತೆರಳಿ ದುರ್ಗಮ ಪ್ರದೇಶಕ್ಕೆ ಜಾರಿ ಬಿದ್ದಿದ್ದ ಯುವಕನನ್ನು ಕೊನೆಗೂ ರಕ್ಷಿಸುವಲ್ಲಿ ವಾಯುಸೇನೆಯ ರಕ್ಷಣಾ ಪಡೆ ಯಶಸ್ವಿಯಾಗಿದೆ.
ದೆಹಲಿ ಮೂಲದ ನಿಶಾಂತ್ ಗುಲ್ ನಂದಿಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ಬಂದಿದ್ದು, ಅಲ್ಲಿ ಪ್ರವೇಶ ನಿಷೇಧವಿದ್ದಿದ್ದರಿಂದ ಪಕ್ಕದ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಿದ್ದ. ಆದರೆ ಅಲ್ಲಿ ಕಾಲು ಜಾರಿ ಕಂದಕಕ್ಕೆ ಬಿದ್ದಿದ್ದು, ಅಪಾಯಕ್ಕೆ ಸಿಲುಕಿದ್ದ. ಅದಾಗ್ಯೂ ಮೊಬೈಲ್ಫೋನ್ ಮೂಲಕ ತುರ್ತು ಸಂದೇಶ ಕಳಿಸಿ ಅಪಾಯಕ್ಕೆ ಸಿಲುಕಿದ್ದ ಮಾಹಿತಿ ರವಾನಿಸಿದ್ದ.
ವಿಷಯ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸಿದ್ದರೂ ಆತನ ರಕ್ಷಣೆ ಸಾಧ್ಯವಾಗಿರಲಿಲ್ಲ. ಬಳಿಕ ವಾಯುಸೇನೆಯ ರಕ್ಷಣಾ ಪಡೆಯ ನೆರವು ಪಡೆದು ಹೆಲಿಕಾಪ್ಟರ್ ಮೂಲಕ ಆತನನ್ನು ಅಲ್ಲಿಂದ ಎತ್ತಲಾಗಿದೆ.
ಅಲ್ಲಿಂದ ನೇರವಾಗಿ ಯಲಹಂಕ ಏರ್ಬೇಸ್ಗೆ ಕರೆದೊಯ್ದು, ಬಳಿಕ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ಹೆಬ್ಬಾಳದ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಬೈಲ್ಫೋನ್ ಜೊತೆಗೇ ಇದ್ದ ಕಾರಣ ಆತ ಪ್ರಾಣ ರಕ್ಷಣೆಗೆ ಮೊರೆಯಿಡಲು ಸಹಾಯವಾಯಿತು. ಇಲ್ಲದಿದ್ದರೆ ಆತ ಪ್ರಾಣಾಪಾಯಕ್ಕೆ ಸಿಲುಕಿದ ಮಾಹಿತಿಯೇ ಸಿಗುತ್ತಿರಲಿಲ್ಲ.