ನವದೆಹಲಿ: ಗಣರಾಜ್ಯೋತ್ಸವದಂದು ರೈತ ಹೋರಾಟದ ಹೆಸರಲ್ಲಿ ಕೆಂಪುಕೋಟೆಯಲ್ಲಿ ನಡೆದ ಗಲಭೆ-ಹಿಂಸಾಚಾರದ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕೆಂಪುಕೋಟೆ ಆವರಣದಲ್ಲಿ ಖಡ್ಗ ಝಳಪಿಸಿ ಪ್ರತಿಭಟನಾಕಾರರಲ್ಲಿ ಆವೇಶ ಮೂಡಿಸಿದ್ದ ಆರೋಪಿಯ ಮನೆಯಿಂದ ಎರಡು ಖಡ್ಗಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಜಸ್ವಂತ್ ಸಿಂಗ್ ಎಂಬುವರ ಮಗನಾದ 30 ವರ್ಷದ ಮನೀಂದರ್ ಸಿಂಗ್ನನ್ನು ಮಂಗಳವಾರ(ಫೆಬ್ರವರಿ 16) ಸಂಜೆ ನಗರದ ಪೀತಮ್ಪುರ ಪ್ರದೇಶದಿಂದ ದೆಹಲಿ ಪೊಲೀಸರ ವಿಶೇಷ ಘಟಕದ ಸಿಬ್ಬಂದಿ ಬಂಧಿಸಿದ್ದಾರೆ. ವೃತ್ತಿಯಿಂದ ಕಾರ್ ಎಸಿ ಮೆಕಾನಿಕ್ ಆಗಿರುವ ಸಿಂಗ್, ತನ್ನ ಮನೆ ಬಳಿಯ ಖಾಲಿ ಸೈಟೊಂದರಲ್ಲಿ ಕತ್ತಿ ವರಸೆಯನ್ನೂ ಹೇಳಿಕೊಡುತ್ತಾನಂತೆ. ರೈತ ಹೋರಾಟ ನಡೆಯುತ್ತಿರುವ ದೆಹಲಿಯ ಸಿಂಘು ಗಡಿಪ್ರದೇಶಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದು, ಅಲ್ಲಿ ರೈತನಾಯಕರ ಭಾಷಣಗಳಿಂದ ಪ್ರಭಾವಿತನಾಗಿದ್ದ. ಫೇಸ್ಬುಕ್ನಲ್ಲಿ ರೈತಹೋರಾಟದ ಬಗ್ಗೆ ನೋಡಿದಾಗ ತನಗೆ ಕೋಪ ಉಕ್ಕಿ ಬರುತ್ತಿತ್ತು ಎಂದು ಸಿಂಗ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಕೆಂಪುಕೋಟೆಗೆ ಮುತ್ತಿಗೆ, ಅನ್ಯ ಧ್ವಜಾರೋಹಣ
ದೆಹಲಿಯ ಸ್ವರೂಪ್ನಗರದ ಸಿಂಧಿ ಕಾಲೊನಿ ನಿವಾಸಿಯಾದ ಮನೀಂದರ್, ಅಕ್ಕಪಕ್ಕದ ಐದು ಜನರನ್ನೂ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿದ್ದ. ಜನವರಿ 26 ರಂದು ಆರೂ ಜನರು ಬೈಕ್ಗಳಲ್ಲಿ ಸಿಂಘು ಗಡಿಯಿಂದ ಮುಕರ್ಬಾ ಚೌಕ್ವರೆಗೆ ರೈತರ ಟ್ರ್ಯಾಕ್ಟರ್ ರಾಲಿಯಲ್ಲಿ ಭಾಗವಹಿಸಿದ್ದರು. ಸಿಂಗ್ ರಾಲಿಗೆ ಬರುವ ಮುಂಚೆ ಎರಡು ಕತ್ತಿಗಳನ್ನು ತನ್ನೊಂದಿಗೆ ತೆಗೆದುಕೊಂಡಿದ್ದ ಎನ್ನಲಾಗಿದೆ. ಅವರ ಯೋಜನೆಯಂತೆ ಸಿಂಗ್ ಕೆಂಪುಕೋಟೆಯಲ್ಲಿ ಕತ್ತಿಗಳನ್ನು ಝಳಪಿಸಿ ಪ್ರದರ್ಶನ ನೀಡಿದ. ಆ ಮೂಲಕ ಪ್ರತಿಭಟನಾಕಾರರಲ್ಲಿ ಆವೇಶ ಮೂಡಿಸಿ ಪೊಲೀಸರು ಮತ್ತು ಇತರ ಸಾರ್ವಜನಿಕ ಅಧಿಕಾರಿಗಳ ಮೇಲೆ ಹಿಂಸಾಚಾರ ನಡೆಸಲು ಪ್ರೇರೇಪಿಸಿದರು. ಕೆಂಪುಕೋಟೆಯ ಗೋಡೆಗಳ ಮೇಲೆ ಹತ್ತಿ ಹಾನಿ ಉಂಟುಮಾಡಿದರು ಎಂದು ಆರೋಪಿಸಲಾಗಿದೆ.
#WATCH: Delhi Police Special Cell arrested Maninder Singh, wanted in connection with Red Fort violence. He was arrested from Pitam Pura & 2 swords were recovered from his house in Swaroop Nagar
Visuals from Jan 26 where Maninder Singh was seen brandishing 2 'khandas' at Red Fort pic.twitter.com/Tr51IyGLWe
— ANI (@ANI) February 17, 2021
ಆರೋಪಿಯ ನಿವಾಸದಿಂದ 4.3 ಅಡಿಯ ಉದ್ದದ ಎರಡು ಖಡ್ಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವನ ಮೊಬೈಲ್ ಫೋನಿನಲ್ಲಿ ಕೆಂಪು ಕೋಟೆಯಲ್ಲಿ ಕತ್ತಿಗಳನ್ನು ಬೀಸುತ್ತಾ ಪ್ರದರ್ಶನ ನೀಡಿದುದರ ದೀರ್ಘ ವೀಡಿಯೋ ರೆಕಾರ್ಡಿಂಗ್ ಲಭ್ಯವಾಗಿದೆ. ಸಿಂಘುಗಡಿಯಲ್ಲಿ ಪ್ರತಿಭಟನೆಯ ಸ್ಥಳದಲ್ಲಿ ತೆಗೆದುಕೊಂಡ ಹಲವು ಫೋಟೋಗಳೂ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)
ಗ್ರೆಟಾ ಟೂಲ್ಕಿಟ್ ಪ್ರಕರಣ : ವಕೀಲೆ ನಿಕಿತಾ ಜೇಕಬ್ಗೆ ನಿರೀಕ್ಷಣಾ ಜಾಮೀನು