ಪಾಲ್ಘರ್: ಲಾಕ್ಡೌನ್ ಅವಧಿಯಲ್ಲಿ ದೇಶದಲ್ಲಿ ಎಲ್ಲಿಯೂ ಬೀಡಿ, ಸಿಗರೇಟ್, ಗುಟ್ಖಾ, ಪಾನ್, ಲಿಕ್ಕರ್ ಯಾವುದೂ ಸಿಗುತ್ತಿಲ್ಲ. ಅಕ್ರಮ ದಂಧೆಯ ಮೂಲಕ ಪಡೆದುಕೊಂಡವರು ಮಾತ್ರವೇ ಅದರ ಖುಷಿ ಅನುಭವಿಸ್ತಿದ್ದಾರೆ. ಇದು ಅಪರಾಧವೂ ಹೌದು. ಆದಾಗ್ಯೂ, ಸಿಕ್ಕ ಸಿಗರೇಟ್ಗಾಗಿ ಜಗಳ ನಡೆದರೂ ಅಚ್ಚರಿ ಇಲ್ಲ. ಈ ಜಗಳ ಅತಿರೇಕಕ್ಕೆ ಹೋಗಿ ಒಂದು ಪ್ರಾಣಕ್ಕೆ ಎರವಾದ ಘಟನೆ ಮಹಾರಾಷ್ಟ್ರದ ಪಾಲ್ಘರ್ನ ವಸೈ ಎಂಬಲ್ಲಿ ಬುಧವಾರ ನಡೆದಿದೆ.
ಒಂದೇ ಒಂದು ಸಿಗರೇಟ್ನ ವಿಚಾರವಾಗಿ ಸಂಬಂಧಿಕರಿಬ್ಬರ ನಡುವೆ ವಾಗ್ವಾದ ನಡೆದಿದೆ. ಅದು ಅತಿರೇಕಕ್ಕೆ ಹೋಗಿ ಕೊಲೆಯಲ್ಲ ಪರ್ಯಾವಸಾನವಾಗಿದೆ. ಹತ್ಯೆಗೀಡಾದವನನ್ನು ದಿನೇಶ್ ಪಾಟೀಲ್(30) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕೆನ್ನೆತ್ ರೊಸಾರಿಯೋ(64) ಎಂದು ಗುರುತಿಸಲಾಗಿದೆ.
ಕೆನ್ನೆತ್ ರೊಸಾರಿಯೋ ಕಳೆದ ಭಾನುವಾರ ಈಸ್ಟರ್ ಸಂಡೇ ಆಚರಿಸಲು ದಿನೇಶ್ ಪಾಟೀಲ್ ಜತೆಗೆ ಆತನ ಸಂಬಂಧಿಯ ಮನೆಗೆ ತೆರಳಿದ್ದರು. ನಂತರ ಅಲ್ಲೇ ಉಳಿದುಕೊಂಡಿದ್ದರು. ಬುಧವಾರ ಹಾಡುಹಗಲ್ಲಲ್ಲೇ ಒಂದು ಸಿಗರೇಟ್ಗಾಗಿ ಈ ಇಬ್ಬರ ನಡುವೆ ವಾಗ್ವಾದ ಶುರುವಾಗಿತ್ತು. ಅದು ಹೊಡೆದಾಟದ ತನಕ ಹೋಗಿ ಕೊನೆಗೆ ರೊಸಾರಿಯೋ ಕೈಗೆ ಸಿಕ್ಕ ಚೂರಿ ಹಿಡಿದು ದಿನೇಶ್ಗೆ ಹಲವು ಬಾರಿ ಇರಿದಿದ್ದ. ಪರಿಣಾಮ ದಿನೇಶ್ ಸ್ಥಳದಲ್ಲೇ ಮೃತಪಟ್ಟ ಎಂದು ಪಾಲ್ಘರ್ನ ಪೊಲೀಸ್ ವಕ್ತಾರ ಹೇಮಂತ್ ಕಾಟ್ಕರ್ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿರುವ ಮಾಣಿಕ್ಪುರ ಪೊಲೀಸರು ಆತನ ವಿರುದ್ಧ ಹತ್ಯೆ ಮತ್ತು ಉದ್ದೇಶಪೂರ್ವಕ ಅವಮಾನ ಮತ್ತು ಇತರೆ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)