ಬೆಂಗಳೂರು: ಇಂಡಿಯನ್ ಫಾರೆಸ್ಟ್ ಸರ್ವಿಸ್ (ಐಎಫ್ಎಸ್)ನ ನಿವೃತ್ತ ಅಧಿಕಾರಿ ಮನೆಯಲ್ಲಿ ಚಪ್ಪಲಿ ಕದಿಯಲು ಬಂದ ಕಳ್ಳನನ್ನು ಅಧಿಕಾರಿಯೇ ರೆಡ್ಹ್ಯಾಂಡ್ ಆಗಿ ಹಿಡಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ಯ ಕಳ್ಳನನ್ನು ಎಚ್ಎಸ್ಆರ್ ಲೇಔಟ್ ಪೊಲೀಸರಿಗೆ ಒಪ್ಪಿಸಲಾಗಿದೆ.
ಎಚ್ಎಸ್ಆರ್ ಲೇಔಟ್ ನಿವಾಸಿ ದೇವಯ್ಯ ನೀಡಿದ ದೂರಿನ ಆಧಾರದ ಮೇಲೆ ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಒರಿಸ್ಸಾ ಮೂಲದ ಮನೋಜ್ ಕುಮಾರ್ ರಾವೋತ್ (42)ನ್ನು ಬಂಧಿಸಿ ಆತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ನಿವೃತ್ತ ಐಎಫ್ಎಸ್ ಅಧಿಕಾರಿ ದೇವಯ್ಯ ಎಚ್ಎಸ್ಆರ್ ಲೇಔಟ್ನ 6ನೇ ಸೆಕ್ಟರ್ನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮೇ 17ರಂದು ರಾತ್ರಿ 9 ಗಂಟೆಗೆ ಮನೆಯ ಸೆಲ್ಯೂಲಾರ್ ಮೂಲಕ ಇವರ ಮನೆಯೊಳಗೆ ಪ್ರವೇಶಿಸಿದ ಆರೋಪಿ ಮನೋಜ್, ವಿದ್ಯುತ್ ಕನೆಕ್ಷನ್ ಆಫ್ ಮಾಡಿ 2ನೇ ಮಹಡಿಗೆ ಬಂದು ಅಲ್ಲಿದ್ದ ಚಪ್ಪಲಿಯನ್ನು ಕಳ್ಳತನ ಮಾಡಿದ್ದ. ಜತೆಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್, ಮಿರರ್ನ್ನು ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದಾಗ ದೇವಯ್ಯ ಈತನನ್ನು ಗಮನಿಸಿದ್ದರು. ಕೂಡಲೇ ಸೆಕ್ಯೂರಿಟಿ ಗಾರ್ಡ್ನನ್ನು ಕರೆದು ಆತನಿಗೆ ಈ ಬಗ್ಗೆ ಮಾಹಿತಿ ನೀಡಿದ ದೇವಯ್ಯ, ತಾವೇ ಕಳ್ಳನನ್ನು ಹಿಡಿದಿದ್ದಾರೆ. ನಂತರ ಮನೋಜ್ನನ್ನು ಪ್ರಶ್ನಿಸಿದಾಗ, ತಾನು ಮನೆಯಲ್ಲಿರುವ ಚಪ್ಪಲಿ ಕಳ್ಳತನ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದ. ದೇವಯ್ಯ ಈ ಕುರಿತು ಎಚ್ಎಸ್ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೋಜ್ನ್ನು ಬಂಧಿಸಿದ್ದಾರೆ.
ತಾನು ಕೆಲ ಸಮಯಗಳಿಂದ ನಗರದ ವಿವಿಧೆಡೆ ಸುತ್ತಾಡಿ ಮನೆಗಳಲ್ಲಿ ಚಪ್ಪಲಿ ಕಳ್ಳತನ ಮಾಡಿ ಮಾರ್ಕೆಟ್ನಲ್ಲಿ ಕಡಿಮೆ ಬೆಲೆಗೆ ಅದನ್ನು ಮಾರಾಟ ಮಾಡುತ್ತಿದ್ದೆ ಎಂದು ಪೊಲೀಸರ ವಿಚಾರಣೆ ವೇಳೆ ಮನೋಜ್ ಹೇಳಿದ್ದಾನೆ. ಚಪ್ಪಲಿ ಕಳ್ಳತನವಾಗಿರುವ ಬಗ್ಗೆ ಸಾಮಾನ್ಯವಾಗಿ ಯಾರೂ ದೂರು ಕೊಡದೇ ಇರುವ ಹಿನ್ನೆಲೆಯಲ್ಲಿ ಈ ಹಿಂದೆ ಈತ ನಡೆಸಿದ್ದ ಕಳ್ಳತನ ಬೆಳಕಿಗೆ ಬರುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಯ್ಯ ಮಗಳು ಶಿಲ್ಪ ದೇವಯ್ಯ ಐಪಿಎಸ್ ಅಧಿಕಾರಿಯಾಗಿದ್ದು, ಕೇರಳದ ಕೊಟ್ಟಾಯಂನಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ನ ಹಿರಿಯ ನಾಯಕಿ ನಿಧನ; ರಾಜ್ಯ ಮತ್ತು ಕೇಂದ್ರದ ಹುದ್ದೆ ನಿರ್ವಹಿಸಿದ್ದ ಮುಖಂಡೆ ಇನ್ನಿಲ್ಲ
ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ
ನಿಂತಿದ್ದ ಆ್ಯಂಬುಲೆನ್ಸ್ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!